ಚೆನ್ನೈ: ಲೋಕಸಭೆ ಚುನಾವಣೆ ಬಳಿಕ ಪ್ರಾದೇಶಿಕ ಪಕ್ಷಗಳನ್ನೆಲ್ಲ ಒಳಗೊಂಡಂತೆ ಹಾಗೂ ಕಾಂಗ್ರೆಸ್–ಬಿಜೆಪಿಯೇತರ ಸಂಯುಕ್ತ ರಂಗಸ್ಥಾಪನೆಯಾಗುವ ಯಾವ ಅವಕಾಶಗಳೂ ಇಲ್ಲ ಎಂದುಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದಾರೆ.
ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರೊಂದಿಗೆ ಸಭೆ ನಡೆಸಿದ ಒಂದು ದಿನದ ಬಳಿಕ ಸ್ಟಾಲಿನ್ ಮಾತನಾಡಿದರು.
ತಮಿಳುನಾಡು ವಿಧಾನಸಭೆ ನಾಯಕರೂ ಆಗಿರುವ ಸ್ಟಾಲಿನ್, ರಾವ್ ಮೈತ್ರಿಕೂಟ ರಚಿಸುವ ಉದ್ದೇಶದಿಂದ ಇಲ್ಲಿಗೆ ಬಂದಿರಲಿಲ್ಲ ಎಂದೂ ಹೇಳಿದ್ದಾರೆ.
‘ಅವರು(ಕೆ.ಚಂದ್ರಶೇಖರ ರಾವ್) ಮೈತ್ರಿಕೂಟ ರಚಿಸುವ ಸಲುವಾಗಿ ಇಲ್ಲಿಗೆ ಬಂದಿರಲಿಲ್ಲ. ಅವರು ತಮಿಳುನಾಡಿಗೆ ಬಂದಿದ್ದು ದೇವಾಲಯಗಳಿಗೆ ಭೇಟಿನೀಡಲು ಬಂದಿದ್ದರು. ಅದರ ನಡುವೆ ನನ್ನೊಡನೆ ಮಾತನಾಡಲು ಸಮಯ ಕೇಳಿದ್ದರು ಅಷ್ಟೇ’ ಎಂದಿದ್ದಾರೆ.
ಕಾಂಗ್ರೆಸ್–ಬಿಜೆಪಿ ಇಲ್ಲದ ಸಂಯುಕ್ತ ರಂಗ ಅಸ್ತಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಅವಕಾಶಗಳು ನನಗೆ ಗೋಚರಿಸುತ್ತಿಲ್ಲ. ಆದಾಗ್ಯೂ ಆ ಕುರಿತು ನಾವು ಮೇ.23ರ ನಂತರ ತೀರ್ಮಾನಿಸಲಿದ್ದೇವೆ’ ಎಂದರು.
ಸ್ಟಾಲಿನ್ ಭೇಟಿಗೂ ಮುನ್ನ ರಾವ್ ಅವರು ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು.