ತಿರುಪತಿ: ಆಂಧ್ರಪ್ರದೇಶ, ತಮಿಳುನಾಡು ಹಾಗೂ ಉತ್ತರಾಖಂಡದ ಹೃಷಿಕೇಶದಲ್ಲಿರುವ ಒಟ್ಟು 50 ಸ್ಥಿರಾಸ್ತಿಗಳನ್ನು ಹರಾಜು ಹಾಕಲು ತಿರುಮಲ ತಿರುಪತಿ ದೇಸಸ್ಥಾನ (ಟಿಟಿಡಿ) ಆಡಳಿತ ಮಂಡಳಿ ನಿರ್ಧರಿಸಿದೆ.
‘ಹರಕೆ ತೀರಿಸಲು ಹಾಗೂ ವಿವಿಧ ಸಂದರ್ಭಗಳಲ್ಲಿ ಭಕ್ತರು ದೇವಸ್ಥಾನಕ್ಕೆ ಹಲವು ದಶಕಗಳ ಹಿಂದೆ ಈ ಸ್ಥಿರಾಸ್ತಿಗಳನ್ನು ನೀಡಿದ್ದಾರೆ. ಇವುಗಳಿಂದ ಈಗ ದೇವಸ್ಥಾನಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ. ಅವುಗಳ ನಿರ್ವಹಣೆಯೂ ಕಷ್ಟ. ಹೀಗಾಗಿ ಹರಾಜು ಹಾಕುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಭಾನುವಾರ ತಿಳಿಸಿದ್ದಾರೆ.
‘ಆಂಧ್ರಪ್ರದೇಶದಲ್ಲಿ 26, ತಮಿಳುನಾಡಿನಲ್ಲಿ 23 ಹಾಗೂ ಹೃಷಿಕೇಶದಲ್ಲಿ 1 ಸೇರಿದಂತೆ 50 ಸ್ಥಿರಾಸ್ತಿಗಳಿವೆ. 1ರಿಂದ 5 ಸೆಂಟ್, ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಜಮೀನುಗಳಿವೆ. ನಿವೇಶನಗಳೂ ಇವೆ. ಇವುಗಳ ಹರಾಜಿನಿಂದ ₹ 24 ಕೋಟಿ ಆದಾಯ ಬರುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.
‘ಸ್ಥಿರಾಸ್ತಿಗಳ ಹರಾಜಿನ ಬಗ್ಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸಿವೆ. ಈ ಹಿಂದೆಯೂ ಟಿಟಿಡಿ ಹಲವಾರು ಸಂದರ್ಭಗಳಲ್ಲಿ ಸ್ಥಿರಾಸ್ತಿಗಳನ್ನು ಹರಾಜು ಹಾಕಿದೆ. ಹೀಗಾಗಿ ಭಕ್ತರು ಗೊಂದಲಕ್ಕೆ ಒಳಗಾಗಬಾರದು’ ಎಂದೂ ಅವರು ಮನವಿ ಮಾಡಿದ್ದಾರೆ.