ಲಖನೌ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಅಜಯ್ಕುಮಾರ್ ಲಲ್ಲು, ಹಿರಿಯ ಮುಖಂಡ ಆರಾಧನಾ ಮಿಶ್ರಾ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರನ್ನು ಮಂಗಳವಾರ ಬಂಧಿಸಲಾಗಿದೆ.
ಕಳೆದ ಡಿಸೆಂಬರ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಪಕ್ಷದ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಶಹನವಾಜ್ ಆಲಂ ಅವರನ್ನು ಸೋಮವಾರ ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಮುಖಂಡರು ಮತ್ತು ಕಾರ್ಯಕರ್ತರು ಮಾಲ್ ಅವೆನ್ಯೂ ಪ್ರದೇಶದಲ್ಲಿರುವ ಪಕ್ಷದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಮುಂದಾದಾಗ ಈ ಕ್ರಮ ತೆಗೆದುಕೊಳ್ಳಲಾಗಿದೆ.
‘ಯಾವಾಗ ಯೋಗಿ ಹೆದರುತ್ತಾರೋ, ಆಗ, ಪೊಲೀಸರನ್ನು ಮುಂದೆ ಬಿಡುತ್ತಾರೆ’ ಎಂದು ಪ್ರತಿಭಟನಕಾರರು ಈ ವೇಳೆ ಘೋಷಣೆಗಳನ್ನು ಕೂಗಿದರು.
ಸೋಮವಾರ ರಾತ್ರಿಯೇ ಲಲ್ಲು, ಮಿಶ್ರಾ ಸೇರಿದಂತೆ ಹಲವು ಕಾರ್ಯಕರ್ತರುಹಜರತ್ಗಂಜ್ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟಿಸಿದರು. ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಘಟನೆಯಿಂದ ಹಲವು ಕಾರ್ಯಕರ್ತರು ಗಾಯಗೊಂಡಿದ್ದರು.
‘ಶಹನವಾಜ್ ಆಲಂ ಬಂಧನದ ವಿರುದ್ಧ ಆಂದೋಲನ ನಡೆಸುತ್ತೇವೆ. ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ವಿರುದ್ಧ ಧ್ವನಿ ಎತ್ತುವುದೇ ತಪ್ಪು ಎಂದಾದರೆ, ನಾವು ಅದನ್ನು ಮುಂದುವರಿಸುತ್ತೇವೆ. ಹಾಗೆಯೇ, ಸಾಮಾನ್ಯ ಜನರು ಧ್ವನಿ ಎತ್ತಲು ಪ್ರೇರೇಪಿಸುತ್ತೇವೆ’ ಎಂದುಲಲ್ಲು ತಿಳಿಸಿದ್ದಾರೆ.