ಸಿಎಎ ವಿರೋಧಿಸಿದವರ ಹೆಸರುಗಳ ಫಲಕ ಪ್ರದರ್ಶಿಸಲು ಯಾವ ಕಾನೂನು ಇದೆ?:ಸುಪ್ರೀಂಕೋರ್ಟ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ ಮೊಕದ್ದಮೆ ದಾಖಲಿಸಲಾಗಿರುವ 57 ಮಂದಿಯ ಹೆಸರು, ವಿವರಗಳನ್ನು ಒಳಗೊಂಡ ಬೃಹತ್ ಫಲಕಗಳನ್ನು ಉತ್ತರ ಪ್ರದೇಶ ಸರ್ಕಾರ ಪ್ರದರ್ಶಿಸಿತ್ತು. ಈ ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಯಾವ ಕಾನೂನು ಪ್ರಕಾರ ಈ ರೀತಿ ಫಲಕ ಪ್ರದರ್ಶಿಸಿದ್ದೀರಿ? ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ.
ಇದು ಖಾಸಗಿತನಕ್ಕೆ ಸಂಬಂಧಪಟ್ಟದ್ದು ಎಂದು ಹೇಳಿದ ನ್ಯಾಯಮೂರ್ತಿ ಯು.ಯು ಲಲಿತ್, ಹೀಗೆ ಫಲಕ ಪ್ರದರ್ಶಿಸಬೇಕಾದರೆ ಅದಕ್ಕೊಂದು ಕಾನೂನು ಇರಬೇಕು. ಇಲ್ಲಿ ಯಾವುದೇ ಕಾನೂನು ಫಲಕ ಪ್ರದರ್ಶಿಸುವ ವಿಷಯವನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೋರಾಟಗಾರರ ಚಿತ್ರವಿರುವ ಹೋರ್ಡಿಂಗ್ ತೆಗೆಸಿ: ಉ.ಪ್ರ. ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿತನಕ್ಕೆ ಸಂಬಂಧಪಟ್ಟಂತೆ 1994ರಲ್ಲಿ ಆರ್. ರಾಜಗೋಪಾಲ್ vs ತಮಿಳುನಾಡು ನಡುವಿನ ನ್ಯಾಯಾಲಯದ ತೀರ್ಪನ್ನು ಮುಂದಿಟ್ಟಿದ್ದಾರೆ. ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿ, ಗನ್ ತೋರಿಸಿದವರಿಗೆ ಗೌಪ್ಯತೆಯ ಹಕ್ಕು ಇರುವುದಿಲ್ಲ ಎಂದು ಮೆಹ್ತಾ ವಾದಿಸಿದ್ದಾರೆ.
ಆದಾಗ್ಯೂ, ಪೋಸ್ಟರ್ ತೆರವುಗೊಳಿಸಬೇಕು ಎಂದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯವು ಈ ಪ್ರಕರಣವನ್ನು ವಿಸ್ತೃತ ಪೀಠದ ಮುಂದಿಟ್ಟಿದೆ. ಈ ವಿಷಯ ಮತ್ತಷ್ಟು ವಿವರವಾಗಿ ಪರಿಶೀಲನೆಗೊಳಪಡಬೇಕಿದೆ ಎಂದು ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಸಿಎಎ ವಿರೋಧಿಗಳ ಹೆಸರುಗಳ ಫಲಕ ಪ್ರದರ್ಶಿಸಿದ ಉತ್ತರ ಪ್ರದೇಶ ಸರ್ಕಾರ
ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದವರ ಫೋಟೊ ಮತ್ತು ವೈಯಕ್ತಿಕ ಮಾಹಿತಿಗಳನ್ನೊಳಗೊಂಡ ಫಲಕವನ್ನು ತೆರವುಗೊಳಿಸಬೇಕು ಎಂದು ಮಾರ್ಚ್ 9ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಬ್ಯಾನರ್ ಪ್ರಕರಣ: ‘ಸುಪ್ರೀಂ’ ಮೊರೆ ಹೋದ ಉತ್ತರ ಪ್ರದೇಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.