ಆಗ್ರಾ:ತಾಜ್ಮಹಲ್ನಿಂದಾಗಿ ವಿಶ್ವವಿಖ್ಯಾತಿ ಪಡೆದಿರುವ ‘ಆಗ್ರಾ’ದ ಹೆಸರನ್ನು ಬದಲಾಯಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆಯೇ? ಇಂತಹದ್ದೊಂದು ಅನುಮಾನ ಇದೀಗ ವ್ಯಕ್ತವಾಗಿದೆ.
ಆಗ್ರಾವನ್ನು ಹಿಂದೆ ಬೇರೆ ಯಾವುದಾದರೂ ಹೆಸರಿನಿಂದ ಕರೆಯಲಾಗುತ್ತಿತ್ತೇ ಎನ್ನುವ ಕುರಿತು ಪರಿಶೀಲನೆ ನಡೆಸಲು ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯ ಸಮಿತಿಯೊಂದನ್ನು ರಚಿಸಿರುವುದೇ ಅನುಮಾನಕ್ಕೆ ಕಾರಣ.
ಉತ್ತರ ಪ್ರದೇಶ ಸರ್ಕಾರದ ‘ಮುದ್ರಾಂಕ ಮತ್ತು ನೋಂದಣಿ ಇಲಾಖೆ’ ವೆಬ್ಸೈಟ್ನಲ್ಲಿ ಆಗ್ರಾದ ಹೆಸರು ಬದಲಿಸಬೇಕು ಎಂದು ಕೆಲವು ಸ್ಥಳೀಯರು ಆಗ್ರಹಿಸಿದ್ದರು. ಈ ವಿಷಯವನ್ನು ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗಿತ್ತು. ಆಡಳಿತ ಈ ವಿಷಯವನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದೆ ಎನ್ನಲಾಗಿದೆ.
ಮುಘಲ್ಸರೈ ರೈಲು ನಿಲ್ದಾಣದ ಹೆಸರನ್ನು ಕಳೆದ ವರ್ಷ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಾಯಿಸಲಾಗಿತ್ತು. ಅದೇ ರೀತಿ ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದೂ ಯೋಗಿ ಸರ್ಕಾರ ಮರುನಾಮಕರಣ ಮಾಡಿತ್ತು.