ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಲಭೆಯಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ: ಗೃಹ ಸಚಿವ ಅಮಿತ್ ಶಾ

Last Updated 11 ಮಾರ್ಚ್ 2020, 15:03 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಗಲಭೆ ಬಗ್ಗೆ ಲೋಕಸಭೆಯಲ್ಲಿ ಬುಧವಾರಚರ್ಚೆ ನಡೆದಿದ್ದು ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ ನಂತರ ಕಲಾಪ ಮುಂದೂಡಲಾಗಿದೆ.

ದೆಹಲಿ ಗಲಭೆಯ ಬಗ್ಗೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಮಾತನಾಡಿದ ನಂತರ ಮಾತು ಶುರು ಮಾಡಿದ ಅಮಿತ್ ಶಾ, ದೆಹಲಿ ಗಲಭೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ದಾಂಜಲಿ ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಲೋಕಸಭೆಯಲ್ಲಿ ಅಮಿತ್ ಶಾ ಹೇಳಿದ್ದೇನು?

- ಫೆಬ್ರುವರಿ 25ರ ನಂತರ ದೆಹಲಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ.ಈ ಗಲಭೆಗಳಿಗೆ ರಾಜಕೀಯ ಬೆರೆಸುವ ಹುನ್ನಾರ ನಡೆದಿದೆ.

- ಹೋಳಿ ಹಬ್ಬದ ನಂತರವೇದೆಹಲಿ ಗಲಭೆ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಕ್ಕೆ ಕಾರಣ, ಹಬ್ಬದ ಸಮಯದಲ್ಲಿ ಕೋಮು ಗಲಭೆಯುಂಟಾಗಬಾರದು ಎಂಬ ಉದ್ದೇಶದಿಂದಾಗಿತ್ತು.

- ಗಲಭೆ ವೇಳೆ ದೆಹಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಲಾಗುತ್ತಿದೆ. ಪೊಲೀಸರು ಅಲ್ಲಿಯೇ ಇದ್ದರು. ಗಲಭೆ ಬಗ್ಗೆ ತನಿಖೆ ನಡೆಸಿ ಪೊಲೀಸರು ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ಇತರ ಪ್ರದೇಶಗಳಿಗೆ ಗಲಭೆ ಹರಡದಂತೆ ತಡೆದ ದೆಹಲಿ ಪೊಲೀಸರನ್ನು ನಾನು ಅಭಿನಂದಿಸುತ್ತೇನೆ.

- ದೆಹಲಿ ಪೊಲೀಸರು 36 ಗಂಟೆಗಳೊಳಗೆ ಗಲಭೆ ನಿಯಂತ್ರಿಸಿದ್ದರು.

- ದೆಹಲಿಯ ಜನಸಂಖ್ಯೆ 1.7 ಕೋಟಿ. ಹಿಂಸಾಚಾರ ನಡೆದ ಪ್ರದೇಶದಲ್ಲಿರುವ ಜನರ ಸಂಖ್ಯೆ 20 ಲಕ್ಷ . ದೆಹಲಿ ಪೊಲೀಸರು ಗಲಭೆ ನಿಯಂತ್ರಿಸಿದರು. ಶೇ.4 ಭೂಪ್ರದೇಶದಲ್ಲಿ ಮತ್ತು ದೆಹಲಿಯ ಶೇ.13 ಭೂಪ್ರದೇಶವನ್ನು ಹೊರತುಪಡಿಸಿ ಬೇರೆಲ್ಲಿಯೂ ಗಲಭೆ ಹಬ್ಬದಂತೆ ಪೊಲೀಸರು ನೋಡಿಕೊಂಡರು.

- ಅಮೆರಿಕದ ಅಧ್ಯಕ್ಷರ ಕಾರ್ಯಕ್ರಮ ಪೂರ್ವ ನಿಗದಿಯಾಗಿತ್ತು. ನನ್ನ ಚುನಾವಣಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ ಅದಾಗಿದ್ದು ನನ್ನ ಭೇಟಿಯೂ ಪೂರ್ವ ನಿಗದಿಯಾದಿತ್ತು. ಮರುದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಗೆ ಭೇಟಿ ನೀಡಿದಾಗ ನಾನು ಅಲ್ಲಿರಲಿಲ್ಲ.ಇಡೀ ದಿನ ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಕುಳಿತಿದ್ದೆ. ಆ ಪ್ರದೇಶಕ್ಕೆ ಭೇಟಿ ನೀಡುವಂತೆ ನಾನು ರಾಷ್ಟ್ರೀಯಭದ್ರತಾ ಸಂಸ್ಥೆಗೆ ಮನವಿ ಮಾಡಿದ್ದೆ.

- ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದೇ ಇದ್ದುದು ನನ್ನ ಸುರಕ್ಷೆಗಾಗಿ ಅಲ್ಲಿರುವ ಭದ್ರತಾ ಸಂಪನ್ಮೂಲಗಳು ಬಳಕೆಯಾಗದಿರಲಿ ಎಂದಾಗಿತ್ತು.

- ದೆಹಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಹಲವಾರು ಸದಸ್ಯರು ಪ್ರಶ್ನೆಗಳನ್ನೆತ್ತಿದ್ದಾರೆ. ವಿರೋಧ ಪಕ್ಷದ ಜವಾಬ್ದಾರಿ ಅದು. ಸಂಸತ್‌ನ ಒಳಗೂ ಹೊರಗೂ ಇದನ್ನು ಪ್ರಶ್ನಿಸಬೇಕು.

- ಯಾವೊಬ್ಬ ಅಮಾಯಕ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡುತ್ತೇವೆ. ಸಶಸ್ತ್ರ ಕಾಯ್ದೆಯಡಿ 49 ಪ್ರಕರಣ ದಾಖಲಾಗಿದ್ದು 153 ಸಶಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಫೆಬ್ರುವರಿ 25ರ ನಂತರ ಶಾಂತಿ ಸಮಿತಿಯು 650ಕ್ಕಿಂತಲೂ ಹೆಚ್ಚು ಸಭೆ ನಡೆಸಿದೆ.

- ಒಂದು ದೊಡ್ಡ ಪಕ್ಷದ ರ‍್ಯಾಲಿ ನಡೆಯಿತು. ಮನೆಯಿಂದ ಹೊರಗೆ ಬನ್ನಿ. ಇದು ಆಕಡೆ ಈಕಡೆ ನಡುವಿನ ಜಗಳ ಎಂದು ಹೇಳಲಾಯಿತು. ಇದು ದ್ವೇಷ ಭಾಷಣ ಎಂದು ನಿಮಗನಿಸುವುದಿಲ್ಲವೇ?

- ಇಷ್ಟೊಂದು ದೊಡ್ಡ ಪ್ರಮಾಣದಲ್ಲಿಹಿಂಸಾಚಾರ ನಡೆಯಿತು. ಕಡಿಮೆ ಸಮಯದಲ್ಲಿ ಇದೆಲ್ಲ ನಡೆಯಲು ಸಂಚು ಕಾರಣ. ಈ ಹಿಂಸಾಚಾರದ ಹಿಂದೆ ಸಂಚು ನಡೆದಿದೆ ಎಂದು ನಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಈಶಾನ್ಯ ದೆಹಲಿ ಗಲಭೆಗೆ ಹಣಕಾಸು ನೆರವು ನೀಡಿದ ಮೂವರನ್ನು ಬಂಧಿಸಿದ್ದೇವೆ.

-ಹಿಂಸಾಚಾರದ ವಿಡಿಯೊಗಳನ್ನು ಕಳುಹಿಸಿ ಎಂದು ಜನರಲ್ಲಿ ಮತ್ತು ಮಾಧ್ಯಮದವರಿಗೆ ನಾವು ಹೇಳಿದ್ದೆವು. ಆದರೆ ದೆಹಲಿಯ ಜನರು ವಿಡಿಯೊಗಳನ್ನು ಸಾವಿರ ಬಾರಿ ಪೊಲೀಸರಿಗೆ ಕಳುಹಿಸಿಕೊಟ್ಟಿದ್ದಾರೆ.

-ಪ್ರಜಾಪ್ರಭುತ್ವದ ರೀತಿಯಲ್ಲಿಯೇ ಸಿಎಎಗೆ ಮತ ನೀಡಿ ಅಂಗೀಕರಿಸಲ್ಪಟ್ಟಿತ್ತು. ಸಿಎಎಯಿಂದಾಗಿ ಧಾರ್ಮಿಕ ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುತ್ತಾರೆ ಎಂದು ತಪ್ಪಾದ ಮಾಹಿತಿ ದೇಶದಾದ್ಯಂತ ಹಬ್ಬಿದೆ. ಪೌರತ್ವ ನಷ್ಟವಾಗಲಿದೆ ಎಂದು ಹೇಳಿರುವುದು ಎಲ್ಲಿ?

- ಫೆಬ್ರುವರಿ 22ರಂದು ಸಾಮಾಜಿಕ ಮಾಧ್ಯಮಗಳಲ್ಲಿ 60 ಖಾತೆಗಳು ತೆರೆದಿದ್ದು,ಫೆಬ್ರುವರಿ 26ಕ್ಕೆ ಅವು ಮುಚ್ಚಲ್ಪಟ್ಟಿತ್ತು. ಇದರ ಹಿಂದಿರುವವರು ಯಾರು ಎಂದು ಪೊಲೀಸರು ಪತ್ತೆ ಹಚ್ಚಲಿದ್ದಾರೆ. ದ್ವೇಷವುಂಟುಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT