ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ: ಹಿಂದೆ ಸರಿದ ಕೇಂದ್ರ

ವಿವಾದಾತ್ಮಕ ಅಂಶವನ್ನು ಅಳಿಸಿ ಪರಿಷ್ಕೃತ ಕರಡು ನೀತಿ ಪ್ರಕಟ
Last Updated 3 ಜೂನ್ 2019, 20:13 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿಯೇತರ ರಾಜ್ಯಗಳ‍ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ವಿವಾದಾತ್ಮಕ ಅಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಿಂದ ಕೇಂದ್ರ ಸರ್ಕಾರ ಸದ್ದಿಲ್ಲದೆ ಕೈಬಿಟ್ಟಿದೆ. ಆದರೆ, ತ್ರಿಭಾಷಾ ಸೂತ್ರ ಮುಂದುವರಿಯಲಿದೆ.

ಹಿಂದಿ ಹೇರಿಕೆ ಮತ್ತು ಉತ್ತರ ಭಾರತದ ಪ್ರಾಬಲ್ಯದ ವಿಚಾರಗಳು ದಕ್ಷಿಣ ಭಾರತದಲ್ಲಿ ಸದಾ ಪ್ರತಿರೋಧಕ್ಕೆ ಕಾರಣವಾಗಿವೆ. ಈ ಬಾರಿಯೂ ಹಿಂದಿ ಹೇರಿಕೆ ವಿಚಾರದಲ್ಲಿ ದಕ್ಷಿಣದಲ್ಲಿ, ಅದರಲ್ಲೂ ಮುಖ್ಯವಾಗಿ ತಮಿಳು
ನಾಡಿನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣ ಭಾರತದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಆಡಳಿತಾರೂಢ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಭಾರಿ ಪ್ರಯತ್ನ ನಡೆಸಿತ್ತು. ಆದರೆ, ಹಿಂದಿ–ಹಿಂದೂ–ಹಿಂದುತ್ವದ ಸಂದೇಶವು ಉತ್ತರ ಭಾರತದ ರೀತಿಯಲ್ಲಿ ದಕ್ಷಿಣದಲ್ಲಿ ಪರಿಣಾಮ ಬೀರಿಲ್ಲ. ಹಾಗಾಗಿ, ಭಾಷೆಯ ವಿಚಾರದಲ್ಲಿ ಉಂಟಾದ ವಿವಾದವನ್ನು ತಕ್ಷಣವೇ ಕೇಂದ್ರವು ಪರಿಹರಿಸಿದೆ ಎನ್ನಲಾಗಿದೆ.

ಮಾನವ ಸಂಪನ್ಮೂಲ ಸಚಿವಾಲಯದ (ಎಚ್‌ಆರ್‌ಡಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ದಕ್ಷಿಣ ರಾಜ್ಯಗಳ ಪ್ರತಿರೋಧದ ಬಳಿಕ ಪರಿಷ್ಕರಿಸಲಾಗಿದೆ. ತ್ರಿಭಾಷಾ ಸೂತ್ರವನ್ನು ಅದರ ಸಂಪೂರ್ಣ ಅರ್ಥದಲ್ಲಿ ದೇಶದಾದ್ಯಂತ ಜಾರಿಗೊಳಿಸಬೇಕಾಗಿದೆ. ಬಹುಭಾಷೆಗಳ ದೇಶದಲ್ಲಿ ಜನರ ಬಹುಭಾಷಿಕ ಸಂವಹನ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ ಎಂದಷ್ಟೇ ನೀತಿಯಲ್ಲಿ ಹೇಳಲಾಗಿದೆ. ಹಿಂದಿಯನ್ನೇ ಕಲಿಯಬೇಕು ಎಂಬ ಅಂಶವನ್ನು ಈಗ ಕೈಬಿಡಲಾಗಿದೆ.

ಇದಕ್ಕೂ ಮೊದಲು ಪ್ರಕಟಿಸಿದ್ದ ಕರಡುವಿನಲ್ಲಿ ಹಿಂದಿ ಭಾಷಿಕ ರಾಜ್ಯಗಳು ಮತ್ತು ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳಲಾಗಿತ್ತು.

ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿ ಇರಬೇಕೆ ಹೊರತು, ಕಡ್ಡಾಯವಾಗಬಾರದು. ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಿಂದಾಗಿ ಮಗುವಿನ ಕಲಿಕಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಕರಲ್ಲದವರ ಮೇಲೆ ಹಿಂದಿ ಹೇರಿಕೆಗೆ ಹೊರಟಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ.

- ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

***

ಹಿಂದಿ ಭಾಷೆಯನ್ನು ಹೇರಲು ಹೊರಟಿರುವ ಕೇಂದ್ರದ ನಡೆ ಸರಿಯಿಲ್ಲ. ಹಿಂದಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದರೆ ನಾವು ಅದನ್ನು ಒಪ್ಪುವುದಿಲ್ಲ.
- ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

***

ಹಿಂದಿ ಹೇರಿಕೆಯ ಪ್ರಶ್ನೆಯೇ ಇಲ್ಲ. ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವುದೇ ನಮ್ಮ ಸರ್ಕಾರದ ಕಾರ್ಯಸೂಚಿ.</p>
- ಡಿ.ವಿ.ಸದಾನಂದಗೌಡ ಕೇಂದ್ರ ರಸಗೊಬ್ಬರ ಸಚಿವ

***

‘ತಪ್ಪಾಗಿ ನುಸುಳಿತ್ತು’

ವಿವಾದಕ್ಕೆ ಕಾರಣವಾಗಬಹುದಾದ ತ್ರಿಭಾಷಾ ಸೂತ್ರವನ್ನು ಕರಡು ನೀತಿಯಲ್ಲಿ ಸೇರಿಸುವ ಉದ್ದೇಶವೇ ಇರಲಿಲ್ಲ. ಹಾಗಿದ್ದರೂ ಅದು ವರದಿಯಲ್ಲಿ ಹೇಗೆ ಸೇರಿಕೊಂಡಿತು ಮತ್ತು ಇಡೀ ನೀತಿಯ ಕೇಂದ್ರ ಬಿಂದುವಾಗಿ ಪರಿವರ್ತಿತವಾಯಿತು ಎಂಬುದು ತಿಳಿದಿಲ್ಲ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

‘ಹಾಗಾಗಿ, ಈ ಪ್ಯಾರಾವನ್ನು ಅಳಿಸಿ ಹಾಕಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಪರಿಷ್ಕೃತ ಕರಡು ನೀತಿಯನ್ನು ಪ್ರಕಟಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಡು ರೂಪಿಸುವ ಸಂದರ್ಭದಲ್ಲಿ ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿದ ಒಂದು ಪ್ಯಾರಾ ತಪ್ಪಾಗಿ ನುಸುಳಿದೆ ಎಂದು ಕರ್ನಾಟಕದ ಶಿಕ್ಷಣ ತಜ್ಞ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯರಾಗಿರುವ ಎಂ.ಕೆ. ಶ್ರೀಧರ್‌ ಅವರು ಭಾನುವಾರವೇ ‘ಪ್ರಜಾವಾಣಿ’ಗೆ ತಿಳಿಸಿದ್ದರು.

ಎಂಬಿಬಿಎಸ್‌ಗೆ ಒಂದೇ ನಿರ್ಗಮನ ಪರೀಕ್ಷೆ

ವೈದ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಹಲವು ಶಿಫಾರಸುಗಳನ್ನು ಕರಡು ನೀತಿಯು ಮಾಡಿದೆ. ಎಂಬಿಬಿಎಸ್‌ ಕೋರ್ಸ್‌ನ ನಾಲ್ಕನೇ ವರ್ಷದ ಕೊನೆಯಲ್ಲಿ ದೇಶದಾದ್ಯಂತ ಒಂದೇ ‘ನಿರ್ಗಮನ’ ಪರೀಕ್ಷೆ ನಡೆಸಬೇಕು ಎಂಬುದು ಅವುಗಳಲ್ಲಿ ಒಂದು.

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೇಂದ್ರೀಕೃತವಾದ ಒಂದೇ ನಿರ್ಗಮನ ಪರೀಕ್ಷೆ ನಡೆಸಿದರೆ ಅದನ್ನು ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆಯಾಗಿಯೂ ಪರಿಗಣಿಸಬಹುದು ಎಂದು ಸಲಹೆ ನೀಡಲಾಗಿದೆ.

ದಂತ ವೈದ್ಯಕೀಯ ಮತ್ತು ಇತರ ಕೋರ್ಸ್‌ಗಳಿಗೂ ಇಂತಹ ವ್ಯವಸ್ಥೆ ಜಾರಿಗೆ ತರಬಹುದು ಎಂದು ಕೆ. ಕಸ್ತೂರಿರಂಗನ್‌ ನೇತೃತ್ವದ ಸಮಿತಿಯು ಹೇಳಿದೆ.

ಮೂಲ ಕರಡು

ಪ್ರಾಥಮಿಕ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್‌ ಮತ್ತು ಒಂದು ಪ್ರಾದೇಶಿಕ ಭಾಷೆಯನ್ನು ಕಲಿಯಬೇಕು. ಆರನೇ ತರಗತಿಯಲ್ಲಿ ಒಂದು ಭಾಷೆಯನ್ನು ಬದಲಾಯಿಸಲು ಅವಕಾಶ ಇದೆ. ಆದರೆ, ಹಿಂದಿ ಭಾಷಿಕ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯನ್ನು ಬದಲಾಯಿಸಲು ಅವಕಾಶ ಇಲ್ಲ. ಭಾರತದ ಒಂದು ಭಾಷೆಯ ಕಲಿಕೆಯನ್ನು ಬದಲಾಯಿಸಲು ಮಾತ್ರ ಅವಕಾಶ. ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಕೂಡ ಹಿಂದಿ ಮತ್ತು ಇಂಗ್ಲಿಷ್‌ ಕಲಿಕೆಯನ್ನು ಮುಂದುವರಿಸಬೇಕು. ಪ್ರಾದೇಶಿಕ ಭಾಷಾ ಕಲಿಕೆಯನ್ನು ಮಾತ್ರ ಬದಲಾಯಿಸಬಹುದು.

ಆರನೇ ತರಗತಿಯ ಬಳಿಕ, ವಿದೇಶಿ ಭಾಷೆಯೊಂದನ್ನು ಕಲಿಯಬೇಕು ಎಂದು ವಿದ್ಯಾರ್ಥಿಯು ಬಯಸಿದರೆ ಅದನ್ನು ನಾಲ್ಕನೇ ಭಾಷೆಯಾಗಿ ಕಲಿಯಬೇಕಾಗುತ್ತದೆ.

ಪರಿಷ್ಕೃತ ಕರಡು

ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಮೂರು ಭಾಷೆಗಳನ್ನು ಕಲಿಯಬೇಕು. ಅವುಗಳ ಪೈಕಿ ಒಂದು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳನ್ನು ಬದಲಾಯಿಸಲು ಬಯಸಿದರೆ ಆರು ಅಥವಾ ಏಳನೇ ತರಗತಿಯಲ್ಲಿ ಅದಕ್ಕೆ ಅವಕಾಶ ಇದೆ. ಆದರೆ, ಈ ಹಂತದಲ್ಲಿ ಮಾಧ್ಯಮಿಕ ಶಾಲೆಯ ಭಾಷಾ ಪರೀಕ್ಷೆಯಲ್ಲಿ ಅವರು ತೇರ್ಗಡೆ ಆಗಬೇಕು (ಒಂದು ಭಾಷೆಯ ಸಾಹಿತ್ಯವನ್ನೂ ಕಲಿಯಬೇಕು). ಮಾಧ್ಯಮಿಕ ಹಂತದ ಪರೀಕ್ಷೆಗಳಲ್ಲಿ ಭಾಷಾ ಬಳಕೆಯ ಜ್ಞಾನವನ್ನಷ್ಟೇ ಪರೀಕ್ಷಿಸಲಾಗುತ್ತದೆ. ಆದ್ದರಿಂದ, ಆರನೇ ತರಗತಿಯಲ್ಲಿ ವಿದ್ಯಾರ್ಥಿಯು ಭಾಷೆಯನ್ನು ಬದಲಾಯಿಸುವುದು ಕಾರ್ಯಸಾಧುವಾದ ವಿಚಾರ. ಮಾಧ್ಯಮಿಕ ಶಾಲೆಯ ಹಂತದಲ್ಲಿ ಹೆಚ್ಚುವರಿ ಭಾಷೆಗಳ ಕಲಿಕೆಯ ಅವಕಾಶ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT