ಬೆಂಗಳೂರು: ಅನ್ಯ ರಾಜ್ಯಗಳಿಂದ ವಾಪಸ್ ಆದವರ ಪೈಕಿ81 ಮಂದಿ ಸೇರಿದಂತೆ ಮಂಗಳವಾರ ಒಂದೇ ದಿನ 101 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 2,283ಕ್ಕೆ ತಲುಪಿದೆ.
ಚಿತ್ರದುರ್ಗದಲ್ಲಿ 20, ಯಾದಗಿರಿಯಲ್ಲಿ 14, ಬೆಳಗಾವಿಯಲ್ಲಿ 13, ಹಾಸನದಲ್ಲಿ 13, ದಾವಣಗೆರೆಯಲ್ಲಿ11, ಬೀದರ್ನಲ್ಲಿ 10, ವಿಜಯಪುರದಲ್ಲಿ 6, ಉಡುಪಿಯಲ್ಲಿ 3, ಬೆಂಗಳೂರಿನಲ್ಲಿ 2, ಕೋಲಾರದಲ್ಲಿ 2 ಹಾಗೂ ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ನಾಲ್ವರು ಅನ್ಯ ರಾಜ್ಯದವರಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ 28,683 ಹಾಸಿಗೆಗಳನ್ನು ಚಿಕಿತ್ಸೆಗೆ ಸಜ್ಜುಗೊಳಿಸಲಾಗಿದೆ.
ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ರಾಜ್ಯದ ಕ್ವಾರಂಟೈನ್ ಕೇಂದ್ರಗಳಲ್ಲಿ ಸದ್ಯ 1.09 ಲಕ್ಷ ಮಂದಿ ನಿಗಾ ವ್ಯವಸ್ಥೆಗೆ ಒಳಪಟ್ಟಿದ್ದಾರೆ. 10 ಸಾವಿರ ಮಂದಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.
ಹಾಸನದ ಹೊಳೆನರಸೀಪುರದಲ್ಲಿ ಎಸ್ಐ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ನಿಯೋಜನೆಗೊಂಡಿದ್ದ ಇವರು 15 ದಿನ ಅಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳ್ಳಾರಿಯ ಹೊಸಪೇಟೆಯಲ್ಲಿ ಆಸ್ಪತ್ರೆಯ ಶುಶ್ರೂಷಕನಿಗೆ ಸೋಂಕು ತಗುಲಿದೆ. ಅವರು ಕ್ವಾರಂಟೈನ್ನಲ್ಲಿ ಇದ್ದರು. ಅವರಿಗೆ ಹೇಗೆ ಸೋಂಕು ತಗುಲಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.