ಬೆಂಗಳೂರು: ‘ಕಳೆದ ವರ್ಷದ ಮೇ ತಿಂಗಳಿನಿಂದ 2019ರ ಮಾರ್ಚ್ ಅಂತ್ಯದವರೆಗೆ ರಾಜ್ಯದ ಆನೆ ಶಿಬಿರಗಳಲ್ಲಿ ಒಟ್ಟು 11 ಆನೆ ಸಾವನ್ನಪ್ಪಿವೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತಂತೆ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.
ಪ್ರಮಾಣ ಪತ್ರದಲ್ಲೇನಿದೆ?: ‘ರಾಜ್ಯದಲ್ಲಿನ ಎಂಟು ಆನೆ ಶಿಬಿರಗಳಲ್ಲಿ 100 ಆನೆಗಳಿವೆ. ಅವುಗಳಲ್ಲಿ ಅಪಘಾತಕ್ಕೀಡಾಗಿ ಒಂದು ಆನೆ ಮತ್ತು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ 10 ಆನೆ ಸಾವನ್ನಪ್ಪಿವೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
‘ಆನೆಗಳ ಆರೈಕೆಗೆ ಒಟ್ಟು 191 ಸಿಬ್ಬಂದಿಯನ್ನು ವಿವಿಧ ಶಿಬಿರಗಳಿಗೆ ನಿಯೋಜಿಸಲಾಗಿದೆ. ಶಿಬಿರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಕೇವಲ 9 ಹುದ್ದೆ ಮಾತ್ರ ಖಾಲಿಯಿವೆ’ ಎಂದು ವಿವರಿಸಲಾಗಿದೆ.
ಏನಿದು ಅರ್ಜಿ?: ‘ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಈ ಬಗ್ಗೆ ವಾಸ್ತವಾಂಶಗಳನ್ನು ತಿಳಿದುಕೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.