ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕ ಕೃಷ್ಣ ಬಾಜಪೇಯಿ ಸೇರಿದಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಜತೆಗೆ, 118 ತಹಶೀಲ್ದಾರ್ಗಳ ವರ್ಗಾಯಿಸಲಾಗಿದೆ.
ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಮ್ ಪಾಷಾ ಅವರನ್ನು ನೇಮಕ ಮಾಡಲಾಗಿದೆ. ರೋಹಿಣಿ ಅವರನ್ನು ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಡಾ.ಎಂ.ವಿ.ವೆಂಕಟೇಶ್ ಅವರನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕರನ್ನಾಗಿ, ಬಾಜಪೇಯಿ ಅವರನ್ನು ಹಾವೇರಿ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
ವಿಧಾನಸಭಾ ಚುನಾವಣೆಯ ಸಮಯದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಕಾಂಗ್ರೆಸ್ ಸರ್ಕಾರ ವರ್ಗಾವಣೆ ಮಾಡಿತ್ತು. ಅವಧಿಗೆ ಮುನ್ನ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮೊರೆ ಹೋಗಿದ್ದರು. ನ್ಯಾಯಮಂಡಳಿ ವರ್ಗಾವಣೆಗೆ ತಡೆಯಾಜ್ಞೆ ನೀಡಿತ್ತು. ಈ ವರ್ಗಾವಣೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ರೇವಣ್ಣ ಆಕ್ಷೇಪಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಕೈವಾಡ ಇದರ ಹಿಂದೆ ಇದೆ ಎಂದೂ ರೇವಣ್ಣ ಟೀಕಿಸಿದ್ದರು. ಲೋಕಸಭಾ ಚುನಾವಣೆಯಿಂದಾಗಿ ರಾಜ್ಯ ಸರ್ಕಾರ ಈಗ ಅವಧಿಗೆ ಮುನ್ನ ವರ್ಗಾಯಿಸಿದೆ.
ತಹಶೀಲ್ದಾರ್ಗಳನ್ನು ಚುನಾವಣಾ ಆಯೋಗದ ಆದೇಶದ ಪ್ರಕಾರ ವರ್ಗಾವಣೆ ಮಾಡಲಾಗಿದೆ.
ಐಪಿಎಸ್ ಅಧಿಕಾರಿಗಳ ವರ್ಗ: ಶುಕ್ರವಾರ ಮತ್ತೆ ನಾಲ್ವರು ಅಧಿಕಾರಿಗಳ ಸ್ಥಾನಪಲ್ಲಟ ಮಾಡಲಾಗಿದೆ. ವಿಪುಲ್ ಕುಮಾರ್ ಅವರನ್ನು ದಕ್ಷಿಣ ವಲಯ ಐಜಿಪಿಯನ್ನಾಗಿ ಗುರುವಾರ ವರ್ಗಾಯಿಸಲಾಗಿತ್ತು. ಅವರ ವರ್ಗಾವಣೆ ಮಾರ್ಪಾಡು ಮಾಡಲಾಗಿದ್ದು, ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅವರ ಸ್ಥಾನಕ್ಕೆ ಉಮೇಶ್ ಕುಮಾರ್ ಅವರನ್ನು ತರಲಾಗಿದೆ. ಶ್ರೀನಾಥ ಮಹಾದೇವ ಜೋಷಿ ಅವರನ್ನು ಗದಗ ಎಸ್ಪಿ ಹಾಗೂ ಎನ್.ವಿಷ್ಣುವರ್ಧನ್ ಅವರನ್ನು ಸಿಐಡಿ ಎಸ್ಪಿಯಾಗಿ ನೇಮಿಸಲಾಗಿದೆ.