ಬೆಂಗಳೂರು: ಸಹಕಾರ ಸಂಘಗಳ ಹೆಚ್ಚುವರಿ ನೋಂದಣಾಧಿಕಾರಿ ಬಿ.ಸಿ. ಸತೀಶ್ ಒಳಗೊಂಡಂತೆ ನಾಲ್ವರು ಅಧಿಕಾರಿಗಳ ಮನೆಗಳು, ನೆಂಟರ ಮನೆಗಳು ಹಾಗೂ ಕಚೇರಿಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಏಕಕಾಲಕ್ಕೆ ಹತ್ತು ಸ್ಥಳಗಳ ಮೇಲೆ ದಾಳಿ ಮಾಡಲಾಗಿದ್ದು, ಎರಡನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ. ಅಧಿಕಾರಿಗಳ ಬಳಿ ಭಾರಿ ಹಣ, ಆಭರಣ, ಬ್ಯಾಂಕ್ ಠೇವಣಿಗಳು, ವಿಮೆ ಪಾಲಿಸಿಗಳು, ಮನೆಗಳು, ನಿವೇಶನಗಳು, ಕಾರುಗಳು, ಬೈಕ್ಗಳು ಮತ್ತು ಲಾಕರ್ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಆರ್ಡಿಸಿಎಲ್) ವಿಜಯಪುರದ ಉಪ ನಿರ್ದೇಶಕ ಶರದ್ ಗಂಗಪ್ಪ ಇಜೇರಿ, ಮುಂಡರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶಗೌಡ ಕುದುರೆಮೋತಿ, ಬಿಬಿಎಂಪಿ ಜೆ.ಬಿ ನಗರದ ಸಹಾಯಕ ಕಂದಾಯ ಅಧಿಕಾರಿ ಎಸ್.ಬಿ. ಮಂಜುನಾಥ್ ಅವರ ಮನೆಗಳನ್ನೂ ಶೋಧಿಸಲಾಗುತ್ತಿದೆ.
ಇಜೇರಿ ಅವರ ಮನೆಯಲ್ಲಿ ₹ 42.66ಲಕ್ಷ ನಗದು ಸಿಕ್ಕಿದೆ. ಬ್ಯಾಂಕ್ ಆಫ್ ಇಂಡಿಯಾ, ಬಸವೇಶ್ವರ ನಗರ ಶಾಖೆಯ ಒಂದು ಲಾಕರ್ನಲ್ಲಿ 1.3 ಕೆ.ಜಿ ತೂಕದ ಚಿನ್ನದ ಆಭರಣಗಳು ದೊರೆತಿವೆ. ಇಜೇರಿ ಅವರ ಎಚ್ಡಿಎಫ್ಸಿ ಬ್ಯಾಂಕ್ ಲಾಕರ್ನಲ್ಲಿ 893 ಗ್ರಾಂ ಚಿನ್ನ, 1 ಕೆ.ಜಿ, 463 ಗ್ರಾಂ ಬೆಳ್ಳಿ ದೊರೆತಿದೆ. ಇದು ಅಧಿಕಾರಿಗಳ ಮನೆಯಲ್ಲಿ ದೊರೆತ ಚಿನ್ನ, ಬೆಳ್ಳಿಗೆ ಹೊರತಾಗಿದೆ.
ವಿವಿಧ ತಂಡಗಳಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದ ದಾಳಿಯು ಐಜಿಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ನಡೆಯಿತು. ಬೆಂಗಳೂರು ದಾಳಿ ನೇತೃತ್ವವನ್ನು ಎಸ್ಪಿ ಡಾ. ಸಂಜೀವ ಪಾಟೀಲ ವಹಿಸಿದ್ದರು.