ಬೆಂಗಳೂರು: ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ವಿಷಯದಲ್ಲಿ ಕಿತ್ತಾಡಿಗೊಂಡಿದ್ದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ನಡುವೆ ಮತ್ತೆ ವಾಕ್ಸಮರ ಶುರುವಾಗಿದೆ.
‘ಲಕ್ಷ್ಮಿ ಅವರನ್ನು ಗೆಲ್ಲಿಸುವ ಮೂಲಕ ನಾನೇ ದೊಡ್ಡ ತಪ್ಪು ಮಾಡಿದ್ದೇನೆ. ಇನ್ನು ಮುಂದೆ ಕುಕ್ಕರ್ ಕೊಟ್ಟರೆ, ವೋಟಿಗೆ ಸಾವಿರ ರೂಪಾಯಿ ಕೊಟ್ಟರೆ ಮತ ಹಾಕಬಾರದು. ಹಣ ನಿಮಗೆ ಎಷ್ಟು ಬೇಕು ಹೇಳಿ ನಾನು ಕೊಡುತ್ತೇನೆ’ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಹೆಬ್ಬಾಳಕರ, ‘ರಮೇಶ ಜಾರಕಿಹೊಳಿ ನಿನ್ನೆ ನೀಡಿರುವ ಹೇಳಿಕೆಯಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ನಿಂತವರ ಪರವಾಗಿ ₹5 ಕೋಟಿ ಹಂಚುವುದಾಗಿ ಹೇಳಿದ್ದಾರೆ. ಬಿಜೆಪಿ ಸೇರಿದ ತಕ್ಷಣ ಮತದಾರರಿಗೆ ಹಂಚಲು ₹5 ಕೋಟಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಚುನಾವಣೆ ಆಯೋಗ ಅನುಮತಿ ನೀಡಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಒಂದು ಕಡೆ ಲಕ್ಷ್ಮಿ ಹೆಬ್ಬಾಳಕರ ದುಡ್ಡು ಹಂಚಿ ಆರಿಸಿ ಬಂದಿದ್ದಾರೆ ಎನ್ನುವ ರಮೇಶ ಜಾರಕಿಹೊಳಿ, ಮತ್ತೊಂದು ಕಡೆ ತಾವು ₹5 ಕೋಟಿ ಹಂಚುತ್ತೇನೆ ಎಂದು ಧ್ವಂದ್ವದ ಹೇಳಿಕೆ ನೀಡಿದ್ದಾರೆ. ಇದನ್ನು ಸ್ವಾಭಿಮಾನಿ ಮತದಾರರು ಅರ್ಥ ಮಾಡಿಕೊಳ್ಳುತ್ತಾರೆ. ರಮೇಶ ಜಾರಕಿಹೊಳಿ ಹಂಚುತ್ತೇನೆ ಎಂದು ಬಿಜೆಪಿ ದುಡ್ಡಾ ಅಥವಾ ಅವರ ಸ್ವಂತದ್ದಾ? ಮತದಾರರಿಗೆ ಅಕೌಂಟ್ ಮೂಲಕ ಹಂಚುತ್ತಾರಾ? ಆರ್.ಟಿ.ಜಿ.ಎಸ್. ಮಾಡುತ್ತಾರಾ ಅಥವಾ ನಗದು ರೂಪದಲ್ಲಿ ಕೊಡುತ್ತಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಕಾಲೆಳೆದಿದ್ದಾರೆ.
‘ಕ್ಷೇತ್ರದ ಜನರು ನನ್ನನ್ನು ಮನೆ ಮಗಳು ಎಂದು ಸ್ವೀಕಾರ ಮಾಡಿದ್ದಾರೆ. ಎಲ್ಲ ಸಮಾಜದ ಬಾಂಧವರು, ಎಲ್ಲ ಭಾಷೆಯ ಜನರು ಈ ಕ್ಷೇತ್ರದಲ್ಲಿ ಅನ್ಯೋನ್ಯವಾಗಿದ್ದೇವೆ. ನನ್ನನ್ನು ಆರಿಸಿ ಕಳಿಸಿದ್ದು ಅತ್ಯಂತ ಹಿಂದುಳಿದ ಕ್ಷೇತ್ರ ಅಭಿವೃದ್ಧಿಯಾಗಲಿ ಎನ್ನುವ ಅಪೇಕ್ಷೆ ಮತ್ತು ವಿಶ್ವಾಸದ ಮೇಲೆಯೇ ಹೊರತು ಯಾವುದೇ ಆಸೆ, ಆಮಿಷಕ್ಕೆ ಮತ ಹಾಕಿಲ್ಲ. ಜನರು ಹಣಕ್ಕಾಗಿ ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಅವರು ಕೂಡಲೇ ಜನರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಬಿಜೆಪಿ ರಾಜ್ಯಾಧ್ಯಕ್ಷರು ಇದರ ಬಗ್ಗೆ ಗಮನಕೊಡಬೇಕು. ಈ ಬಗ್ಗೆ ರಮೇಶ ಜಾರಕಿಹೊಳಿ ನಿಮ್ಮ ಜೊತೆಗೆ ಚರ್ಚಿಸಿದ್ದಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದೂ ಅವರು ಹೇಳಿದ್ದಾರೆ.
‘ಬೆಳಗಾವಿ ತಾಲೂಕಿನಲ್ಲಿ ಮೂವರು ಶಾಸಕರಿದ್ದೇವೆ. ಒಬ್ಬರು ಜೈನ್, ಮತ್ತೊಬ್ಬರು ಮರಾಠಾ ಹಾಗೂ ಇನ್ನೊಬ್ಬರು ಲಿಂಗಾಯತ. ಹಿಂದೆ ಇಬ್ಬರು ಜೈನ್ ಹಾಗೂ ಓರ್ವ ಮುಸ್ಲಿಂ ಸಮಾಜದವರಿದ್ದರು. ಅದಕ್ಕೂ ಹಿಂದೆ ಒಬ್ಬ ಮರಾಠಾ, ಒಬ್ಬ ಜೈನ್ ಹಾಗೂ ಮತ್ತೊಬ್ಬರು ಮುಸ್ಲಿಂ ಶಾಸಕರಿದ್ದರು. ಇದು ಇಲ್ಲಿಯ ಜನರು ಸೌಹಾರ್ದಯುತ ರಾಜಕಾಣಕ್ಕೆ ಮನ್ನಣೆ ನೀಡುವುದನ್ನು ತೋರಿಸುತ್ತದೆ’ ಎಂದು ವಿವರಿಸಿದ್ದಾರೆ.
‘ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಅಥವಾ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಚಂದಗಡದಲ್ಲಿ ಮರಾಠಿ ಸಮಾಜದ ಹಕ್ಕಿನಲ್ಲಿ ತಮ್ಮ ಅಳಿಯ, ವಾಲ್ಮೀಕಿ ಸಮಾಜದ ಅಪ್ಪಿರಾವ್ ಪಾಟೀಲ ಅವರನ್ನು ಆಯ್ಕೆಮಾಡಿಸಿಕೊಳ್ಳುವಾಗ ಮರಾಠಿ ಭಾಷಿಕರ ಹಕ್ಕಿನ ಚ್ಯುತಿ ಆಗಲಿಲ್ಲವೇ? ಈ ಬಗ್ಗೆ ಸ್ಪಷ್ಟೀಕರಣ ನೀಡಿದ ನಂತರ ಮರಾಠಿ ಭಾಷಿಕರ ಬಗ್ಗೆ ರಮೇಶ ಜಾರಕಿಹೊಳಿ ಮಾತನಾಡಲಿ’ ಎಂದುಸವಾಲೆಸೆದಿದ್ದಾರೆ.
‘ಬೆಳಗಾವಿ ತಾಲೂಕನ್ನು ಯಾವುದೇ ಕಾರಣಕ್ಕೂ ರಿಪಬ್ಲಿಕ್ ಆಫ್ ಗೋಕಾಕ್ ಮಾಡಲು ನಾನು ಬಿಡುವುದಿಲ್ಲ. ಜನರು ಇವರ ಷಢ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ. ರಮೇಶ ಜಾರಕಿಹೊಳಿ ಇಂತಹ ಕೀಳು ರಾಜಕಾರಣ ಬಿಟ್ಟು ಹಾಗೂ ಜನರ ಮಧ್ಯೆ ವಿಷಬೀಜ ಬಿತ್ತುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಕೊಡಲಿ’ ಎಂದು ಟಾಂಗ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.