ಮಂಗಳೂರು: ಪಶ್ಚಿಮ ಕರಾವಳಿಯ ಪ್ರಮುಖ ಕೇಂದ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ, ಕೃಷಿಕರ ಬವಣೆ ನಿವಾರಣೆ ಹೀಗೆ ಹತ್ತು, ಹಲವು ಯೋಜನೆಗಳಿಗಾಗಿ ಜಿಲ್ಲೆಯ ಜನರು ಎದುರು ನೋಡುತ್ತಿದ್ದಾರೆ.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಬಿಜೆಪಿಗೆ ಭದ್ರ ನೆಲೆ ಇದ್ದು, ಈ ಬಾರಿ ಭರಪೂರ ಕೊಡುಗೆಗಳು ಸಿಗಬಹುದು ಎನ್ನುವ ಆಶಾಭಾವನೆ ಹೆಚ್ಚಾಗಿದೆ. ಈಗಾಗಲೇ ಜಿಲ್ಲೆಯ ವ್ಯಾಪಾರೋದ್ಯಮಿಗಳು, ಜನಪ್ರತಿನಿಧಿಗಳು ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಪಟ್ಟಿಯನ್ನೂ ಸಲ್ಲಿಸಿದ್ದಾರೆ.
ಪ್ರಮುಖವಾಗಿ ಈ ಬಾರಿಯ ಕೇಂದ್ರ ಸರ್ಕಾರದಲ್ಲಿ ಮೀನುಗಾರಿಕೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಬಹುದಿನಗಳ ಬೇಡಿಕೆಯಾಗಿದ್ದ ಮೀನುಗಾರಿಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಿದೆ. ಗಿರಿರಾಜ್ಸಿಂಗ್ ಅವರು ಮೀನುಗಾರಿಕೆ ಸಚಿವರಾಗಿದ್ದು, ಮೀನುಗಾರರ ಸಂಕಷ್ಟಗಳಿಗೆ ಶೀಘ್ರ ಸ್ಪಂದನೆ ಸಿಗಬಹುದು ಎನ್ನುವ ನಿರೀಕ್ಷೆ ಇದೆ.
‘ಮೀನುಗಾರಿಕೆ ಸದ್ಯಕ್ಕೆ ಭಾರಿ ನಷ್ಟದಲ್ಲಿ ಸಾಗುತ್ತಿದೆ. ಮೀನುಗಾರಿಕೆಯಲ್ಲಿ ಸಿಕ್ಕ ಲಾಭಾಂಶ ಡೀಸೆಲ್ಗೆ ವೆಚ್ಚವಾಗುತ್ತಿದೆ. ಡೀಸೆಲ್ ಭಾರವೇ ಮೀನುಗಾರರಿಗೆ ಸಾಕಷ್ಟು ಪೆಟ್ಟು ನೀಡುತ್ತಿದೆ. ರಾಜ್ಯ ಸರ್ಕಾರ ಡೀಸೆಲ್ಗೆ ನೀಡುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರವೂ ನೀಡಬೇಕು. ಮೀನುಗಾರಿಕೆ ಸಂಬಂಧಿಸಿದ ಉಪಕರಣಗಳ ಮೇಲಿನ ಜಿಎಸ್ಟಿ ಹಿಂತೆಗೆದುಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ. ಖಂಡಿತವಾಗಿ ಇದು ಈಡೇರಲಿದೆ’ ಎಂಬ ಎನ್ನುತ್ತಾರೆ ಮೀನುಗಾರ ಮುಖಂಡ ನಿತಿನ್ ಕುಮಾರ್.
ಎನ್ಎಂಪಿಟಿಗೆ ಸಂಪರ್ಕ:
ಸದ್ಯಕ್ಕೆ ಎನ್ಎಂಪಿಟಿಯಿಂದ ಸರಕು ಸಾಗಣೆ ಆಗುತ್ತಿದ್ದರೂ, ನಿರೀಕ್ಷಿತ ಪ್ರಮಾಣವನ್ನು ತಲುಪಿಲ್ಲ. ಇದಕ್ಕೆ ಬೆಂಗಳೂರಿನಿಂದ ಎನ್ಎಂಪಿಟಿಗೆ ತ್ವರಿತಗತಿಯ ಸಂಪರ್ಕ ರಸ್ತೆ ಇಲ್ಲದಾಗಿದೆ ಎನ್ನುವುದು ವಾಣಿಜ್ಯೋದ್ಯಮಿಗಳು ಹೇಳುವ ಮಾತು.
‘ಬೆಂಗಳೂರಿನಿಂದ ಎನ್ಎಂಪಿಟಿ ಮೂಲಕ ರಫ್ತು ಮಾಡಲು ಹೆಚ್ಚಿನ ಅವಕಾಶಗಳಿವೆ. ಆದರೆ, ಬೆಂಗಳೂರಿನಿಂದ ಎನ್ಎಂಪಿಟಿಗೆ ಬರಲು ರಸ್ತೆ ಮಾರ್ಗ ಸರಿಯಾಗಿ ಇಲ್ಲದೇ ಇರುವುದರಿಂದ ಬೆಂಗಳೂರಿನ ಉದ್ಯಮಿಗಳು ಚೆನ್ನೈ ಬಂದರನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಬೆಂಗಳೂರು–ಮಂಗಳೂರು ಮಧ್ಯೆ ಶಿರಾಡಿ ಸುರಂಗ ಮಾರ್ಗ ನಿರ್ಮಾಣವಾದಲ್ಲಿ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದರೂ, ಅವುಗಳ ಪ್ರಯೋಜನ ಮಾತ್ರ ಇದುವರೆಗೆ ಆಗುತ್ತಿಲ್ಲ ಎನ್ನುವ ಕೊರಗು ಇಲ್ಲಿನ ಜನರದ್ದು.
ಎನ್ಎಂಪಿಟಿಯಲ್ಲಿ ಸರಕು ಸಾಗಣೆಯ ಜತೆಗೆ ವಿದೇಶಿ ಪ್ರವಾಸಿ ಹಡಗುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಎನ್ಎಂಪಿಟಿ ಅಧಿಕಾರಿಗಳ ತಂಡ ಈಗಾಗಲೇ ಕೊಚ್ಚಿ ಬಂದರಿಗೆ ಭೇಟಿ ನೀಡಿ, ಅಲ್ಲಿನ ಸೌಕರ್ಯಗಳ ಕುರಿತು ವರದಿ ಸಲ್ಲಿಸಿದ್ದಾರೆ. ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ. ಈ ಮೂಲಕ ವಿದೇಶಿ ವಿನಿಮಯ ಗಳಿಕೆಗೂ ಹೆಚ್ಚಿನ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಐಟಿ ಹಬ್:
ಮಾಹಿತಿ ತಂತ್ರಜ್ಞಾನಕ್ಕೆ ಬೆಂಗಳೂರಿನ ನಂತರ ಮಂಗಳೂರಿನಲ್ಲಿ ಹೆಚ್ಚಿನ ಅವಕಾಶಗಳಿವೆ. ಸಂಪರ್ಕ ಸಾಧನವಾಗಿ ವಿಮಾನ ನಿಲ್ದಾಣವಿದ್ದರೆ, ಇಲ್ಲಿರುವ ಹಲವಾರು ಎಂಜಿನಿಯರಿಂಗ್ ಕಾಲೇಜುಗಳಿಂದಾಗಿ ಹೇರಳ ಮಾನವ ಸಂಪನ್ಮೂಲವೂ ಲಭ್ಯವಾಗಿದೆ. ಇದನ್ನು ಬಳಕೆ ಮಾಡಿಕೊಂಡು, ಐಟಿ ಹಬ್ ಸ್ಥಾಪನೆಗೆ ಒತ್ತು ನೀಡಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ.
ಈ ಭಾಗದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು, ಉದ್ಯೋಗ ಅರಸಿ ಬೆಂಗಳೂರಿನತ್ತ ಹೋಗುವುದು ಅನಿವಾರ್ಯವಾಗಿದೆ. ಜತೆಗೆ ಬೆಂಗಳೂರಿನಲ್ಲೂ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕರಾವಳಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಇಲ್ಲಿನ ಜನರದ್ದಾಗಿದೆ.
**
ಕೇಂದ್ರ ಬಜೆಟ್ ಮೇಲೆ ಜಿಲ್ಲೆಯ ನಿರೀಕ್ಷೆ
* ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆ, ರಬ್ಬರ್ ಬೆಳೆಗಾರರಿಗೆ ನೆರವು
* ಜಿಲ್ಲೆಯಲ್ಲಿ ಐಟಿ ಹಬ್ ಸ್ಥಾಪನೆಗೆ ಅಗತ್ಯ ಕ್ರಮ
* ಪ್ರವಾಸೋದ್ಯಮಕ್ಕೆ ಬೇಕಾದ ಯೋಜನೆ ರೂಪಿಸುವುದು ಅಗತ್ಯ
* ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳ ಅನುಷ್ಠಾನ
* ಸುಬ್ರಹ್ಮಣ್ಯ - ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ
* ಕೊಂಕಣ ರೈಲ್ವೆಯಲ್ಲಿ ಮಂಗಳೂರು–ಮುಂಬೈ ದ್ವಿಪಥ ಕಾಮಗಾರಿ
* ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿಗೆ ವೇಗ
**
ಅಡಿಕೆಗೆ ಬೇಕಿದೆ ಬೆಂಬಲ
ಅಡಿಕೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು ಬೆಳೆದ ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಕೃಷಿಕರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರವು ಅಡಿಕೆ ಬೆಳೆಗೆ ಬೆಂಬಲ ಬೆಲೆ ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎನ್ನುವುದು ಇಲ್ಲಿನ ಬೆಳೆಗಾರರ ಒತ್ತಾಯವಾಗಿದೆ.
ವಿದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ದೇಶಿಯ ಅಡಿಕೆಯ ಬೆಲೆ ಕುಸಿಯುತ್ತಿದೆ. ಈ ಆಮದನ್ನು ತಡೆಯುವ ಕುರಿತು ಕೇಂದ್ರ ಸರ್ಕಾರ ವಿಶೇಷ ಗಮನಹರಿಸಬೇಕು. ಈ ಬಗ್ಗೆ ವಿಶೇಷ ತನಿಖಾದಳವನ್ನು ನೇಮಿಸಬೇಕು. ವಿದೇಶದಿಂದ ಬರುತ್ತಿರುವ ಅಡಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎನ್ನುವ ಬೇಡಿಕೆಯನ್ನು ಕ್ಯಾಂಪ್ಕೊ ನಿಯೋಗ ಈಗಾಗಲೇ ಕೇಂದ್ರ ಸಚಿವರಿಗೆ ಸಲ್ಲಿಸಿದೆ.
ಜತೆಗೆ ಕೊಳೆರೋಗ ಮತ್ತು ಹಳದಿರೋಗಗಳಿಗೆ ತುತ್ತಾಗಿ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆಗೆ ಬೆಲೆ ಕುಸಿಯುತ್ತಿದೆ. ಇಂತಹ ಬೆಳೆಗಾರರಿಗೆ ಪರಿಹಾರ ಧನ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ದೊರಕಿಸಿ ಕೊಡಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.
ಅಡಿಕೆ ಮತ್ತು ಕಾಳುಮೆಣಸಿನ ಅಕ್ರಮ ಆಮದು ನಿಷೇಧ ಮಾಡಬೇಕು. ಸಹಕಾರ ವಲಯದ ಮೇಲೆ ವಿಧಿಸಲಾಗುತ್ತಿರುವ ಆದಾಯ ತೆರಿಗೆ ಕಡಿತಗೊಳಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
– ಎಸ್.ಆರ್. ಸತೀಶ್ಚಂದ್ರ,ಕ್ಯಾಂಪ್ಕೊ ಅಧ್ಯಕ್ಷ
**
ಅಡಿಕೆ ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಲಾಗಿದೆ.
– ನಳಿನ್ಕುಮಾರ್ ಕಟೀಲ್,ಸಂಸದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.