ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಧಮ್ ಇಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಹೇಳಿದರು.
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಿಎಸ್ಟಿ ಹಣ ಕೊಟ್ಟಿಲ್ಲ. 15ನೇ ಹಣಕಾಸು ಆಯೋಗದಡಿ ನೀಡಬೇಕಾದ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ಬರಬೇಕಿರುವುದನ್ನು ಕೇಳಲು ಅವನಿಗೆ ಧಮ್ ಇಲ್ಲ ಎಂದರು.
ಬಡವರಿಗೆ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ರಾಜಕೀಯ ಕಾರಣಕ್ಕಾಗಿ ನಿಲ್ಲಿಸಲು ಮುಂದಾಗಿರೋದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.
ಮೋದಿ ತಾಳಕ್ಕೆ ಯಡಿಯೂರಪ್ಪ ಒಬ್ಬರೇ ಅಲ್ಲ, ದೇಶದ ಜನರೇ ಕುಣಿಯಲಾರಂಭಿಸಿದ್ದಾರೆ ಎಂದರು.
ಎಪಿಎಂಸಿ, ಕಾರ್ಮಿಕ, ವಿದ್ಯುಚ್ಛಕ್ತಿ ಮಸೂದೆ ಸೇರಿಂತೆ ಭೂ ಸುಧಾರಣೆ ಕಾಯ್ದೆ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಬೇಕು. ಸುಗ್ರೀವಾಜ್ಞೆ ಮೂಲಕ ಈ ತಿದ್ದುಪಡಿ ಮಸೂದೆ ಜಾರಿಗೊಳಿಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದರು.
ಕೋವಿಡ್ ಸಂಕಷ್ಟದ ಕಾಲದಲ್ಲಿ, ಎಲ್ಲೆಡೆ 144 ಕಲಂ ನಿಷೇಧಾಜ್ಞೆ ಇರುವಾಗ ಪ್ರತಿಭಟಿಸುವ ಹಕ್ಕನ್ನು ಮೊಟಕುಗೊಳಿಸಿ ಸುಗ್ರೀವಾಜ್ಞೆ ಹೊರಡಿಸುತ್ತಿದ್ದಾರೆ. ರಾಜಕೀಯವಾಗಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಜೈಲ್ ಭರೋಗೂ ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಗುಡುಗಿದರು.
ಕೇಂದ್ರದ ಬಳಿ ಹಣವೇ ಇಲ್ಲ. ಅರ್ಥ ವ್ಯವಸ್ಥೆ ಹಾಳಾಗಿದೆ. 62% ಉದ್ಯೋಗ ನಷ್ಟವಾಗಿದೆ. ಕೋಟಿ ಕೋಟಿ ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ.
ಬಡವರು, ರೈತರ ಬಳಿ ಕೊಳ್ಳುವ ಶಕ್ತಿ ಇಲ್ಲದಂತಹ ಸಂದರ್ಭದಲ್ಲಿ ಲೀಟರ್ ಪೆಟ್ರೋಲ್ ಗೆ ₹ 5 ಹೆಚ್ಚಾಗಿದೆ. ಇದು ಬಡವರ ಬದುಕನ್ನು ಮತ್ತಷ್ಟು ಭಾರವನ್ನಾಗಿಸಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
2015ನೇ ಸಾಲಿನ ಕೆಪಿಎಸ್ ಸಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನೆಪ ಹೇಳದೆ ಉತ್ತರ ಪತ್ರಿಕೆ ನೀಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಂಜು ರೋಗ: ವಿಶ್ವನಾಥ್ ಗೆ ನಂಜು ರೋಗವಿದೆ. ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಬುದ್ದಿ ಇದೆಯಾ..? ನಾನೇನು ಬಿಜೆಪಿ ಹೈಕಮಾಂಡಾ.. ಟಿಕೆಟ್ ತಪ್ಪಿಸಲು. ನಾನು ಕಾಂಗ್ರೆಸ್ ಎಂದು ಹೇಳಿದರು.