ಬೆಂಗಳೂರು: ರಾಜಕಾರಣಿಗಳು ಎಂದರೆ ಪರಸ್ಪರ ಬೈದಾಡಿಕೊಳ್ಳುತ್ತಲೇ, ಗುದ್ದಾಡುತ್ತಲೇ ಇರುವವರು ಎಂಬ ಭಾವನೆ ಕರಗಿ ಅವರಲ್ಲೂ ಪ್ರೀತಿ, ಸ್ನೇಹ ಮತ್ತು ಆರ್ದ್ರತೆ ಇದೆ ಎಂಬುದಕ್ಕೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಾರಂಭ ಸಾಕ್ಷಿಯಾಯಿತು.
ಅರಮನೆ ಆವರಣದ ವೈಟ್ ಪೆಟಲ್ಸ್ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಸಿದ್ಧಾಂತದ ಕಡು ಟೀಕಾಕಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಾಜರಿ ಕಾರ್ಯಕ್ರಮಕ್ಕೆ ವಿಶಿಷ್ಟ ಆಯಾಮವನ್ನೇ ನೀಡಿತು.
ಸಿದ್ದರಾಮಯ್ಯ ತಮ್ಮ ಎಂದಿನ ಮಾತು,ನಗು, ನಡಿಗೆಯ ಶೈಲಿಯಿಂದ ಬಿಜೆಪಿ ಮತ್ತು ಯಡಿಯೂರಪ್ಪ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದೂ ಅಲ್ಲದೇ, ‘ಹೌದಾ ಹುಲಿಯಾ’ ಎಂದೂ ಅಭಿಮಾನದ ಕೂಗನ್ನೂ ಹಾಕಿಸಿಕೊಂಡರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾವನೆಯೂ ಇದೇ ಆಗಿತ್ತು. ‘ಕೆಲವು ಸಂದರ್ಭಗಳಲ್ಲಿ ರಾಜಕೀಯವನ್ನು ಬದಿಗಿಟ್ಟು ವಿಭಿನ್ನ ವಿಚಾರಧಾರೆಯ ರಾಜಕಾರಣಿಗಳು ಪರಸ್ಪರ ಸೇರಬೇಕು. ಸ್ನೇಹ ಮತ್ತು ಮನುಷ್ಯತ್ವಕ್ಕೆ ಬೆಲೆ ನೀಡಬೇಕು. ಈ ಕಾರ್ಯಕ್ರಮ ಅದಕ್ಕೊಂದು ಮೇಲ್ಪಂಕ್ತಿಯಾಗಿದೆ’ ಎಂದರು.
ನಿರಂತರ ಹೋರಾಟಗಳ ಮೂಲಕ ಯಡಿಯೂರಪ್ಪ ಕರ್ನಾಟಕ ಮಾತ್ರವಲ್ಲ, ರಾಷ್ಟ್ರ ಮಟ್ಟದ ವರ್ಚಸ್ವಿ ನಾಯಕರೂ ಹೌದು -ರಾಜನಾಥ್ ಸಿಂಗ್ ರಕ್ಷಣಾ ಸಚಿವ