ಮೈಸೂರು: ‘ನಾನು ಕಾಂಗ್ರೆಸಿಗನಾಗಿದ್ದರೂ ಹೇಳುತ್ತಿದ್ದೇನೆ, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು’ ಎಂದು ಉದ್ಯಮಿ ಅಶೋಕ್ ಖೇಣಿ ಇಲ್ಲಿ ಭಾನುವಾರ ಹೇಳಿದರು.
ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.
'ಕೆಲಸ ಮಾಡುವವರಿಗೆ ಜನ ಅಧಿಕಾರ ನೀಡಬೇಕು. ಇಲ್ಲವಾದಲ್ಲಿ 5 ವರ್ಷ ಮಾಡಿದ ತಪ್ಪನ್ನು ಅನುಭವಿಸಬೇಕಾಗುವುದು. ಯಡಿಯೂರಪ್ಪ ಒಳ್ಳೆಯ ಕೆಲಸಗಾರ. ಹೀಗಾಗಿ, ಪಕ್ಷ ಮರೆತು ಅವರನ್ನು ಬೆಂಬಲಿಸುತ್ತೇನೆ' ಎಂದು ಅವರು ಹೇಳಿದರು.
‘ನನ್ನ ಜಾತಿಯ ಕಾರಣದಿಂದಾಗಿ ನೈಸ್ ರಸ್ತೆಯನ್ನು ಇನ್ನೂ ಪೂರ್ಣಗೊಳಿಸಲಾಗಿಲ್ಲ. ನನ್ನ ಹೆಸರು ಅಶೋಕ್ ಖೇಣಿ ಬದಲು ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿಯವರೆಗೂ ರಸ್ತೆಯನ್ನು ವಿಸ್ತರಿಸುತ್ತಿದ್ದೆ’ ಎಂದು ಹೇಳಿದರು.
ನಗುವುದನ್ನು ರೂಢಿಸಿಕೊಳ್ಳಲಿ: ‘ಯಡಿಯೂರಪ್ಪ ಯಾವಾಗಲೂ ಚಿಂತೆ ಮಾಡುತ್ತಿರುವಂತೆ ಕಾಣುತ್ತಾರೆ. ಸ್ವಲ್ಪ ನಗುವುದನ್ನು ರೂಢಿಸಿಕೊಳ್ಳಬೇಕು. ನೀವು ನಗುತ್ತಿದ್ದರೆ ನಮಗೆ ಶಕ್ತಿ ಬಂದಂತೆ ಆಗುವುದು’ ಎಂದು ಐಎಎಸ್ ನಿವೃತ್ತ ಅಧಿಕಾರಿ ಡಾ.ಸಿ.ಸೋಮಶೇಖರ್ ಮನವಿ ಮಾಡಿದರು.