ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮಾಡಿಯಾದರೂ ರೈತರಿಗೆ ಯೋಜನೆ ರೂಪಿಸುವೆ: ಸಿಎಂ ಬಿ.ಎಸ್. ಯಡಿಯೂರಪ್ಪ

ಸುತ್ತೂರು ಜಾತ್ರೆ: ಸಮಾರೋಪ ಸಮಾರಂಭದಲ್ಲಿ ಸಿಎಂ ಭರವಸೆ
Last Updated 26 ಜನವರಿ 2020, 13:51 IST
ಅಕ್ಷರ ಗಾತ್ರ

ಮೈಸೂರು: ‘ಸಾಲ ಮಾಡಿಯಾದರೂಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಉತ್ತಮ ಯೋಜನೆಗಳನ್ನು ರೂಪಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಸುತ್ತೂರು ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿ, ‘ಮಾರ್ಚ್‌ 5 ರಂದು ಬಜೆಟ್‌ ಮಂಡಿಸಲಿದ್ದೇನೆ. ರೈತರ ಹಿತ ಕಾಪಾಡಲು ಸಾಧ್ಯವಾದ ಎಲ್ಲವನ್ನೂ ಮಾಡುವೆ. ಬೇರೆ ಯೋಜನೆಗಳಿಗೆ ಹಣ ಕಡಿಮೆಯಾದರೂ ಪರವಾಗಿಲ್ಲ, ರೈತನ ಜೀವನದಲ್ಲಿ ಬದಲಾವಣೆ ತರುವುದಕ್ಕೆ ಬದ್ಧನಾಗಿದ್ದೇನೆ. ಅದಕ್ಕಾಗಿ ಹಣ ಹೊಂದಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ’ ಎಂದರು.

‘ನಾನು ಹೆಚ್ಚು ಮಾತನಾಡಿ ಜನರನ್ನು ತೃಪ್ತಿಪಡಿಸುವ ಅಗತ್ಯವಿಲ್ಲ. ರೈತ ನೆಮ್ಮದಿಯಿಂದ ಬದುಕಬೇಕು. ಆತನ ಬೆಳೆಗೆ ಸೂಕ್ತ ಬೆಲೆ ಸಿಗಬೇಕಿದೆ. ಸರ್ಕಾರದ ಖಜಾನೆ ಈ ನಾಡಿನ ಅನ್ನದಾತನ ಕಣ್ಣು ಒರೆಸಲು ಇರುವಂತದ್ದು’ ಎಂದು ನುಡಿದರು.

ಭಾವಿ ಸಚಿವ ಸುಧಾಕರ್: ಮುಖ್ಯಮಂತ್ರಿ ಅವರು ವೇದಿಕೆಯಲ್ಲಿದ್ದ ಶಾಸಕ ಡಾ.ಕೆ.ಸುಧಾಕರ್ ಹೆಸರು ಹೇಳುವಾಗ ‘ಬರುವ ಕೆಲವೇ ದಿನಗಳಲ್ಲಿ ಸಚಿವರಾಗಲಿರುವ ಸುಧಾಕರ್‌ ಅವರೇ’ ಎನ್ನುವ ಮೂಲಕ ಸಚಿವ ಸ್ಥಾನವನ್ನು ಖಚಿತಪಡಿಸಿದರು.

ಈ ಬಗ್ಗೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಪ್ರತಿಕ್ರಿಯಿಸಿದ ಸುಧಾಕರ್, ‘ವೇದಿಕೆಯಲ್ಲಿ ನನ್ನ ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದು ಸಂತಸವಾಗಿದೆ. ಗೆದ್ದ ಎಲ್ಲ 11 ಮಂದಿಗೂ ಸಚಿವ ಸ್ಥಾನ ಸಿಗಲಿದೆ’ ಎಂದರು.

‘ಸದನದಲ್ಲಿ ಉತ್ತರಿಸುವೆ’

‘ರಾಜ್ಯದ ಖಜಾನೆ ಖಾಲಿಯಾಗಿದೆ’ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಮಾರ್ಚ್‌ನಲ್ಲಿ ಬಜೆಟ್‌ ಮಂಡಿಸಿ ಸದನದಲ್ಲೇ ಅವರಿಗೆ ಉತ್ತರಿಸುವೆ. ಖಜಾನೆ ಖಾಲಿಯಾಗಿದೆಯೇ, ಇಲ್ಲವೇ ಎಂಬುದು ಬಜೆಟ್‌ ಬಳಿಕ ಸಿದ್ದರಾಮಯ್ಯನವರಿಗೆ ತಿಳಿಯಲಿದೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT