ಉಳ್ಳಾಲ: ‘ಶಾಸಕ ಯು.ಟಿ ಖಾದರ್ ಹೇಳಿಕೆಯಂತೆ ಮಂಗಳೂರು ಹೊತ್ತಿ ಉರಿದಿದ್ದು, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ಮಂಗಳೂರು ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.
ತೊಕ್ಕೊಟಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ನೀಡಿದೆ. ಈ ನಡುವೆ ಶಾಸಕ ಯು.ಟಿ ಖಾದರ್ ಡಿ.17 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿ, ರಾಜ್ಯ ಹೊತ್ತಿ ಉರಿಯಲಿದೆ ಎಂದಿದ್ದರು. ಅದರಂತೆ ರಾಜ್ಯ ಮತ್ತು ಜಿಲ್ಲೆ ಹೊತ್ತಿ ಉರಿದಿದೆ’ ಎಂದು ದೂರಿದರು.
ಪೊಲೀಸರು ಕೂಡಲೇ ಪ್ರಥಮ ಮಾಹಿತಿ ವರದಿ ದಾಖಲಿಸಿ, ಶಾಸಕ ಯು.ಟಿ. ಖಾದರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರ ನಿಯೋಜಿತ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಯಶವಂತ ಅಮೀನ್, ಮೋಹನದಾಸ್ ಶೆಟ್ಟಿ, ಹೇಮಂತ್ ಶೆಟ್ಟಿ, ಸಂಜೀವ ಶೆಟ್ಟಿ, ನಮಿತಾ ಶ್ಯಾಂ, ಮನೋಜ್ ಆಚಾರ್ಯ, ಜೀವನ್ ಕುಮಾರ್ ತೊಕ್ಕೊಟ್ಟು, ಮೋಹನ್ ರಾಜ್ ಕೆ.ಆರ್ ಇದ್ದರು.
ಪಾಂಡೇಶ್ವರ ಠಾಣೆಯಲ್ಲೂ ಪ್ರಕರಣ: ಪೌರತ್ವ ತಿದ್ದುಪಡಿ ಕಾಯ್ದೆ ಕರ್ನಾಟಕದಲ್ಲಿ ಅನುಷ್ಠಾನ ಮಾಡಿದಲ್ಲಿ ಕರ್ನಾಟಕ ಹೊತ್ತಿ ಉರಿಯುವುದಾಗಿ ಪ್ರಚೋದನೆ ನೀಡಿದ ಖಾದರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ, ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.