ಬೆಂಗಳೂರು: ಹಲವು ಗೊಂದಲಗಳಿಗೆ ಕಾರಣವಾಗಿದ್ದ ಧಾರವಾಡ ಲೋಕಸಭೆ ಕ್ಷೇತ್ರದಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಇನ್ನೊಂದೆಡೆ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಲಾಗಿದ್ದು, ಅಲ್ಲಿ ಎಚ್.ಬಿ ಮಂಜಪ್ಪ ಎಂಬುವವರಿಗೆ ಟಿಕೆಟ್ ನೀಡಲಾಗಿದೆ.
ಧಾರವಾಡದಿಂದ ಸ್ಪರ್ಧೆ ಮಾಡಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಮೊದಲಿಂದಲೂ ಉತ್ಸುಕರಾಗಿದ್ದರು. ಆದರೆ, ಒಂದು ಹಂತದಲ್ಲಿ ಅವರಿಗೆ ಟಿಕೆಟ್ ದೊರೆಯುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ವಿಳಂಬವಾಗಿಯಾದರೂ ಕೊನೆಗೆ ವಿನಯ್ ಕುಲಕರ್ಣಿ ಅವರಿಗೇ ಟಿಕೆಟ್ ನೀಡಲಾಗಿದೆ.
Congress Central Election Committee announces the next list of candidates for the ensuing elections to the Lok Sabha pic.twitter.com/BdHq3M7UT9
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಇಂದು ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಷ್ಟರೊಳಗೇ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಇದಕ್ಕೂ ಮೊದಲು ಶಾಖಿರ್ ಸನದಿ ಅವರ ಹೆಸರೂ ದಾವಣಗೆರೆ ಕ್ಷೇತ್ರಕ್ಕೆಕೇಳಿ ಬಂದಿತ್ತು. ಅವರು ಅಭ್ಯರ್ಥಿಯಾಗಿ ಘೋಷಣೆಯಾಗಿರುವುದಾಗಿಯೂ ಮಂಗಳವಾರ ಸುದ್ದಿಯಾಗಿತ್ತು. ಆದರೆ, ಸನದಿ ಅವರೇ ಆ ಸುದ್ದಿಗಳನ್ನು ನಿರಾಕರಿಸಿದ್ದರು.
ಇನ್ನೊಂದೆಡೆ ದಾವಣೆಗೆರೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿಕೊಂಡಿದೆ. ಮೊದಲಿಗೆ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಆರಂಭದಲ್ಲಿ ಸ್ಪರ್ಧೆಗೆ ಸಮ್ಮತಿಸಿದ್ದ ಶ್ಯಾಮನೂರು ನಂತರ ನಿರಾಕರಿಸಿದ್ದರು. ಕೊನೆಗೆ ಶ್ಯಾಮನೂರು ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಶ್ಯಾಮನೂರು ಶಿವಶಂಕರಪ್ಪ ಕುಟುಂಬ ಸ್ಪರ್ಧೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಈಗ ಎಚ್.ಬಿ ಮಂಜಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.