ಬೆಂಗಳೂರು: ಮುಂಬೈನಿಂದ ಉದ್ಯಾನ ಎಕ್ಸ್ಪ್ರೆಸ್ ರೈಲಿನಲ್ಲಿ ಮಂಗಳವಾರ ಬೆಳಿಗ್ಗೆ ನಗರ ನಿಲ್ದಾಣಕ್ಕೆ ಬಂದಿಳಿದಿದ್ದ ಹಲವು ಪ್ರಯಾಣಿಕರು ನಿಲ್ದಾಣದಲ್ಲಿದ್ದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.
ಪರಾರಿಯಾದವರ ಪತ್ತೆಗೆ ಪಶ್ಚಿಮ ವಿಭಾಗ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ವಯಂಪ್ರೇರಿತವಾಗಿ ಬಂದು ಕ್ವಾರಂಟೈನ್ಗೆ ಒಳಪಡುವಂತೆಯೂ ಪೊಲೀಸರು ಕೋರಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, 'ಉದ್ಯಾನ ಎಕ್ಸ್ಪ್ರೆಸ್ ರೈಲಿನಲ್ಲಿ 667 ಪ್ರಯಾಣಿಕರು ಬಂದಿದ್ದರು. ಅವರೆಲ್ಲರೂ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸೂಚಿಸಿದ್ದ ಸ್ಥಳದಲ್ಲಿ ಕ್ವಾರಂಟೈನ್ ಇರಬೇಕಿತ್ತು. ಆದರೆ, ಅವರಲ್ಲಿ ಹಲವರು ಪರಾರಿಯಾಗಿದ್ದಾರೆ' ಎಂದರು.
'ಹೊರ ರಾಜ್ಯದಿಂದ ಬಂದವರಿಂದಲೇ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ, ಯಾರೇ ಹೊರ ರಾಜ್ಯದಿಂದ ಬಂದರೆ ಅವರಿಗೆ ಕ್ವಾರಂಟೈನ್ ಮಾಡಲು ಸರ್ಕಾರದಿಂದ ಸಕಲ ವ್ಯವಸ್ಥೆ ಮಾಡಲಾಗಿದೆ' ಎಂದರು.
'ರೈಲಿನಲ್ಲಿ ಬಂದವರ ಮೇಲೆ ಲಾಠಿ ಬೀಸಿ, ಅವರನ್ನು ಬೆನ್ನಟ್ಟಿ ಕ್ವಾರಂಟೈನ್ಗೆ ಕಳುಹಿಸಲು ಆಗುವುದಿಲ್ಲ. ಅವರೇ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಅವರೆಲ್ಲ ಕ್ವಾರಂಟೈನ್ಗೆ ಬರಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು' ಎಂದೂ ಭಾಸ್ಕರ್ ರಾವ್ ಎಚ್ಚರಿಸಿದರು.
'ಟಿಕೆಟ್ ಬುಕ್ಕಿಂಗ್ ಮಾಹಿತಿ ಆಧರಿಸಿ ವಿಳಾಸ ಪತ್ತೆ ಮಾಡಲಾಗುತ್ತಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.