ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 378 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ಇಂದು 121 ಪ್ರಕರಣಗಳು ವರದಿಯಾಗಿವೆ. ಯಾದಗಿರಿಯಲ್ಲೂ 103 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಇಂದು 18 ಪ್ರಕರಣಗಳಷ್ಟೇ ಕಂಡು ಬಂದಿವೆ.
ಗಂಭೀರವಾದ ವಿಚಾರವೆಂದರೆ, ಹಲವರ ಸೋಂಕಿನ ಮೂಲವನ್ನು ಅರೋಗ್ಯ ಇಲಾಖೆ ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ತನ್ನ ಬುಲೆಟಿನ್ನಲ್ಲಿ ತಿಳಿಸಿದೆ. ಇವರಿಗೆ ಸೋಂಕು ಹೇಗೆ ತಗುಲಿತು, ಇವರು ಯಾರ ಸಂಪರ್ಕಕ್ಕೆ ಬಂದಿದ್ದರು ಎಂಬುದರ ಮಾಹಿತಿ ಇಲಾಖೆಗೆ ಇನ್ನೂ ಸಿಕ್ಕಿಲ್ಲ.
ಇನ್ನು ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರೆಗೆ ಕೊರೊನಾ ವೈರಸ್ಗೆ ರಾಜ್ಯದಲ್ಲಿ 59 ಮಂದಿ ಪ್ರಾಣ ತೆತ್ತಂತಾಗಿದೆ.
ಬೆಳಗಾವಿಯಲ್ಲಿಬಾಲಕಿ ಸೇರಿ ಐವರಿಗೆ ಸೋಂಕು; ಒಟ್ಟು ಸೋಂಕಿತರ ಸಂಖ್ಯೆ 257ಕ್ಕೆ ಏರಿಕೆ
ಬೆಳಗಾವಿ: ಎಂಟು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯ ಐದು ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದುವರೆಗೆ ಒಟ್ಟು ಸೋಂಕಿತರಾದವರ ಸಂಖ್ಯೆ 257ಕ್ಕೆ ತಲುಪಿದೆ. ಶನಿವಾರ ದೃಢಪಟ್ಟ ಐದು ಜನರಲ್ಲಿ ಇಬ್ಬರು ಗುಜರಾತ್ನಿಂದ ಹಾಗೂ ಮೂವರು ಮಹಾರಾಷ್ಟ್ರದಿಂದ ವಾಪಸ್ಸಾದವರು ಇದ್ದಾರೆ. ಎಂಟು ವರ್ಷದ ಬಾಲಕಿ ಹಾಗೂ ನಾಲ್ಕು ಜನ ಪುರುಷರು ಇದರಲ್ಲಿ ಸೇರಿದ್ದಾರೆ.