ಮಡಿಕೇರಿ: ವಿರಾಜಪೇಟೆಯ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಗುಜರಾತ್ ರಾಜ್ಯದ ‘ಶೂರಾ ತಬ್ಲೀಗ್ ಜಮಾತ್’ಗೆ ಸೇರಿದ 9 ಮೌಲ್ವಿಗಳು ಪತ್ತೆಯಾಗಿದ್ದು ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ತಿಳಿಸಿದರು.
‘ಗುಜರಾತ್ನ 9 ಮಂದಿ ಹಾಗೂ ಬಾಡಿಗೆದಾರ ಸೇರಿ 10 ಮಂದಿಯನ್ನು ಜಿಲ್ಲಾಡಳಿತವು ನಗರ ಹೊರ ವಲಯದಲ್ಲಿ ಸ್ಥಾಪಿಸಿರುವ ಸಂಪರ್ಕ ತಡೆ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಗಂಟಲು ದ್ರವದ ಮಾದರಿ ಹಾಗೂ ರಕ್ತದ ಮಾದರಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
‘ಜನವರಿಯಲ್ಲಿ ಮುಂಬೈನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದಲ್ಲಿ 9 ಮಂದಿಯೂ ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಫೆ.3ಕ್ಕೆ ವಿರಾಜಪೇಟೆಗೆ ಬಂದಿದ್ದರು. ಇಲ್ಲಿನ ಸ್ಥಳೀಯ ಮಸೀದಿಯಲ್ಲಿ 40 ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗುಜರಾತ್ಗೆ ವಾಪಸ್ಸಾಗುವ ವೇಳೆಗೆ ದೇಶವೇ ಲಾಕ್ಡೌನ್ ಆಗಿದ್ದರ ಪರಿಣಾಮ, ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು’ ಎಂದು ಮಾಹಿತಿ ನೀಡಿದರು.
‘ಜಿಲ್ಲೆಗೆ ಬಂದ ದಿನದಿಂದಲೂ ಇವರು ಹೊರಗೆ ಓಡಾಟ ನಡೆಸಿಲ್ಲ. ಆದರೆ, ವಿವಿಧ ರಾಜ್ಯಗಳಲ್ಲಿ ಗುಂಪು ಗುಂಪಾಗಿ ಸಂಚಾರ ನಡೆಸಿದ್ದಾರೆ. ಯಾರಲ್ಲೂ ಕೋವಿಡ್–19 ರೋಗ ಲಕ್ಷಣ ಕಂಡುಬಂದಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ’ ಎಂದು ಎಸ್ಪಿ ವಿವರಿಸಿದರು.
‘ಸರ್ಕಾರದ ಸೂಚನೆಯಂತೆ ತಬ್ಲೀಗ್ ಜಮಾತ್ನ ಸಮಾವೇಶದಲ್ಲಿ ಪಾಲ್ಗೊಂಡವರು ಜಿಲ್ಲೆಯಲ್ಲಿ ನೆಲೆಸಿದ್ದರೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಈ ತಂಡ ಹಲವು ದಿನಗಳಿಂದ ಜಿಲ್ಲೆಯಲ್ಲೇ ಇದ್ದರೂ ಮಾಹಿತಿ ನೀಡಿಲ್ಲ. ವಿರಾಜಪೇಟೆಯ ವೈದ್ಯರೊಬ್ಬರ ಬಳಿ ತಪಾಸಣೆ ನಡೆಸಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಅದನ್ನು ಪರಿಶೀಲಿಸುತ್ತೇವೆ. ತಪ್ಪು ಮಾಹಿತಿ ನೀಡಿದ್ದರೆ ಎಫ್ಐಆರ್ ದಾಖಲು ಮಾಡುತ್ತೇವೆ’ ಎಂದು ಸುಮನ್ ಹೇಳಿದರು.