ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಯಲ್ಲಿರಲು ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಕೊಡುತ್ತಾರೆ: ಸಿ.ಟಿ. ರವಿ ಟೀಕೆ

Last Updated 26 ಜನವರಿ 2020, 11:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು:‘ಬೆದರಿಕೆ ಯಾರಿಂದ ಬಂದಿದೆ ಎಂಬುದನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ನಿರ್ದಿಷ್ಟವಾಗಿ ಹೇಳಬೇಕು. ಕಳೆದುಹೋಗಬಾರದು ಎಂದು ಕೆಲವೊಮ್ಮೆ ಹೇಳಿಕೆ ನೀಡುತ್ತಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂಥ ಹೇಳಿಕೆಗಳ ಮೂಲಕ ಸಕ್ರಿಯವಾಗಿರಬಾರದು. ಜನರ ನಡುವೆ ಸಕ್ರಿಯವಾಗಿರಲು ಸಕಾರಾತ್ಮಕ ಅಂಶಗಳು ಬಹಳಷ್ಟು ಇವೆ. ಸಂಘ ಪರಿವಾರವನ್ನು ಆರೋಪಿಸುವುದು ಈಗ ‘ಫ್ಯಾಷನ್‌’ ಆಗಿದೆ. ಯಾರ ಮೂಲಕ ಬೆದರಿಕೆ ಬಂದಿದೆ ಎಂದು ದೂರು ಕೊಟ್ಟರೆ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘ಕುಮಾರಸ್ವಾಮಿ ಅವರೂ ಸೇರಿದಂತೆ ಜನಸಾಮಾನ್ಯರೆಲ್ಲರ ರಕ್ಷಣೆ ಸರ್ಕಾರದ ಹೊಣೆ. ನಾವು ಬೆದರಲ್ಲ, ಯಾರನ್ನೂ ಬೆದರಿಸುವುದೂ ಇಲ್ಲ’ ಎಂದು ಹೇಳಿದರು.

ಭಾಷಾ ಮಾಧ್ಯಮ ತೀರ್ಪು ಪುನರ್‌ಪರಿಶೀಲನೆಗೆ ಅರ್ಜಿ

ಭಾಷಾ ಮಾಧ್ಯಮದ ತೀರ್ಪು ಪುನರ್‌ಪರಿಶೀಲನೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮೈಸೂರು ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಕರ್ನಾಟಕ ಸರ್ಕಾರವು ಇತರ ರಾಜ್ಯಗಳ ಸಹಯೋಗ ಪಡೆದು ವಿಶೇಷ ಅರ್ಜಿ ಸಲ್ಲಿಸುವ ಪ್ರಯತ್ನ ಮಾಡಲೇಬೇಕಿದೆ. ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ರಾಜ್ಯ ಭಾಷೆಗಳು ಆಡು ಭಾಷೆಗಳಾಗುವ, 50 ವರ್ಷಗಳ ನಂತರ ಅಳಿಯುವ ಅಪಾಯ ಇದೆ. ಭಾರತೀಯ ಭಾಷೆಗಳು ಕಠಿಣ ಪರಿಸ್ಥಿತಿಯಲ್ಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಸರ್ಕಾರವಿದೆ. ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಶುರು ಮಾಡುತ್ತಿದೆ. ಅಪಾಯಗಳಿಂದ ಕನ್ನಡವನ್ನು ರಕ್ಷಿಸಿ ಬೆಳೆಸಬೇಕಿದೆ. ಮುಖ್ಯಮಂತ್ರಿಯವರೊಂದಿಗೆ ಶಿಕ್ಷಣ ಸಚಿವರು, ಪಕ್ಷಗಳ ಮುಖಂಡರು, ಚಿಂತಕರ ಸಭೆಯನ್ನು ಏರ್ಪಡಿಸಿ ನಿರ್ಣಯ ಕೈಗೊಳ್ಳಲಾಗುವುದು. ಇತರ ರಾಜ್ಯಗಳೊಂದಿಗೂ ಸಮಾಲೋಚನೆ ಸಭೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT