ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಿಂದಲೇ ದೇವೇಗೌಡರು ರಾಜ್ಯಸಭೆಗೆ ಎಂದು ಹೇಳುವ ಮುಟ್ಠಾಳ ನಾನಲ್ಲ: ಡಿಕೆಶಿ

Last Updated 11 ಜೂನ್ 2020, 11:19 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವೇಗೌಡರು ನನ್ನ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ ಎಂದು ಹೇಳುವ ಮುಟ್ಠಾಳ ನಾನಲ್ಲ’ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಗೌಡರಿಗೆ ಅವರದೇ ಆದ ವ್ಯಕ್ತಿತ್ವ, ಹಿರಿತನವಿದೆ. ರಾಜ್ಯಸಭೆಗೆ ದೇವೇಗೌಡರನ್ನು ಬೆಂಬಲಿಸುವುದು ಪಕ್ಷದ ವರಿಷ್ಠರ ತೀರ್ಮಾನ. ಅವರು ರಾಷ್ಟ್ರದ ಆಸ್ತಿ. ಅವರ ಆಯ್ಕೆ ವಿಚಾರದಲ್ಲಿ ಚೌಕಾಸಿ ಮಾಡುತ್ತಾ ಕೂರುವುದಿಲ್ಲ. ನನಗೂ 40 ವರ್ಷದ ರಾಜಕೀಯ ಅನುಭವವಿದೆ. ಪರಿಷತ್ ಚುನಾವಣೆಯಲ್ಲಿ ನಾನು ಯಾರಿಗೂ ಟಿಕೆಟ್ ಕೊಡುವುದಿಲ್ಲ. ಅದೇನಿದ್ದರು ಪಕ್ಷದ ಹೈಕಮಾಂಡ್ ನಿರ್ಧಾರ. ಅವರು ತೆಗೆದುಕೊಂಡ ನಿರ್ಧಾರವನ್ನು ತಿಳಿಸುವುದು ನನ್ನ ಕೆಲಸ’ಎಂದು ತಿಳಿಸಿದರು.

ಪದಗ್ರಹಣ: ‘ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಅನುಮತಿ ನೀಡಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದೆ. ಅನುಮತಿ ನೀಡಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ನನ್ನ ಪದಗ್ರಹಣ ಕಾರ್ಯಕ್ರಮದ ದಿನಾಂಕವನ್ನು ಪಕ್ಷದ ನಾಯಕರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಘೋಷಣೆ ಮಾಡುವೆ’ಎಂದರು.

‘ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದಕ್ಕೆ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಅಧಿಕಾರಿಗಳು ಪತ್ರ ಬರೆದಿದ್ದರು. ಇಂದು ಬೆಳಗ್ಗೆ ಅವರು ಅನುಮತಿ ನೀಡಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳು ಇರಬೇಕು. ವಿರೋಧ ಪಕ್ಷ ಇಲ್ಲವಾದರೆ ಪ್ರಜಾಪ್ರಭುತ್ವ ಇರುವುದಿಲ್ಲ. 14ರಂದು ಕಾರ್ಯಕ್ರಮ ನಡೆಯುವುದಿಲ್ಲ ಎಂದು ನಾನು ನಿನ್ನೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಂದು ಆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಬೇಕಿದೆ. ಅವರೊಟ್ಟಿಗೆ ಚರ್ಚೆ ಮಾಡಿದ ಕೆಲವೇ ತಾಸುಗಳಲ್ಲಿ ದಿನಾಂಕ ಪ್ರಕಟಿಸುತ್ತೇನೆ’ ಎಂದರು.

‘ಕೆಲವೇ ದಿನಗಳಲ್ಲಿ ಪರಿಷತ್ ಚುನಾವಣೆಯೂ ಎದುರಾಗಲಿದ್ದು, ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ.ನಾವು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಮೂಲೆ ಮೂಲೆಯಲ್ಲೂ ಈ ಕಾರ್ಯಕ್ರಮ ನಡೆಸುತ್ತಿದ್ದು ಅವರ ಜತೆ ಚರ್ಚಿಸಬೇಕಿದೆ. ಮಾಧ್ಯಮಗಳ ಮೂಲಕ ನಾನು ಕಾರ್ಯಕರ್ತರು ಹಾಗೂ ವೀಕ್ಷಕರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಪ್ರತಿ ಪಂಚಾಯ್ತಿಗಳಿಗೆ ತೆರಳಿರುವವರು ತಮ್ಮ ಕೆಲಸ ಮುಂದುವರಿಸಿಕೊಳ್ಳಲಿ ಜತೆಗೆ ಈ ವಿಚಾರವಾಗಿ ಮಾಹಿತಿ ರವಾನಿಸಿ’ಎಂದರು.

‘ಆಷಾಢ ಬಂತು ಅಂತಾ ಕಾರ್ಯಕ್ರಮ ಮುಂದೂಡುವುದಿಲ್ಲ. ನಾನು ನನ್ನದೇ ಆದ ನಂಬಿಕೆಗಳನ್ನು ಇಟ್ಟುಕೊಂಡಿದ್ದೇನೆ ನಿಜ. ನಾನು ಮೊದಲ ದಿನದಿಂದಲೇ ನನ್ನ ಕಾರ್ಯ ಮಾಡಿಕೊಂಡು ಬಂದಿದ್ದೇನೆ. ಜನರಿಗೆ ಅನುಕೂಲವಾಗುವ ದಿನ ಕಾರ್ಯಕ್ರಮ ಮಾಡುತ್ತೇನೆ’ ಎಂದರು.

ಇದು ಕಾರ್ಯಕರ್ತರ ಕಾರ್ಯಕ್ರಮ: ‘ಈ ಕಾರ್ಯಕ್ರಮ ನನ್ನದಲ್ಲ. ಕಾರ್ಯಕರ್ತರದ್ದು. ನನ್ನ ಪ್ರತಿಜ್ಞಾ ಕಾರ್ಯಕ್ರಮ ಅಲ್ಲ, ಕಾರ್ಯಕರ್ತರ ಪ್ರತಿಜ್ಞಾ ಕಾರ್ಯಕ್ರಮ. ಅವರ ಜತೆ ನಾನು ಒಬ್ಬ ಕಾರ್ಯಕರ್ತನಂತೆ ನಿಮ್ಮೆಲ್ಲರ ಸಮ್ಮುಖದಲ್ಲಿ ಪ್ರತಿಜ್ಞೆ ಸ್ವೀಕರಿಸುತ್ತೇನೆ. ಮುಖ್ಯಮಂತ್ರಿಗಳು ರಾಜ್ಯ ಹಾಗೂ ದೇಶದ ಮುಂದೆ ಅವರ ಅನುಮತಿ ನೀಡಿದ್ದಾರೆ. ವೈಯಕ್ತಿಕವಾಗಿ ಮಾತು ಕೊಟ್ಟರೆ ಬೇರೆ ವಿಚಾರ. ಆದರೆ ಅವರು ಮಾಧ್ಯಮಗಳ ಮೂಲಕ ಇಡೀ ದೇಶದ ಜನರ ಮುಂದೆ ಅನುಮತಿ ಕೊಟ್ಟಿದ್ದಾರಲ್ಲ. ಇನ್ನೇನು ಬೇಕು? ಅವರು ಅನುಮತಿ ಕೊಟ್ಟಿದ್ದು ನನಗೆ ತಿಳಿಯುವ ಮುನ್ನವೇ ಅಮೆರಿಕ, ಆಸ್ಟ್ರೇಲಿಯಾದಲ್ಲಿರುವ ನನ್ನ ಸ್ನೇಹಿತರಿಗೆ ಮಾಹಿತಿ ಹೋಗಿದ್ದು ಅವರು ನನಗೆ ಸಂದಸ ಕಳುಹಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಈ ವಿಚಾರದಲ್ಲಿ ಅವರನ್ನು ಸತ್ಯ ಪರೀಕ್ಷೆ ಮಾಡಲು ಹೋಗುವುದಿಲ್ಲ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT