ಕಲಬುರ್ಗಿ: ಸರ್ಕಾರಿ ಶಾಲಾ ಮಕ್ಕಳಿಗೆ ಆಸಕ್ತರು ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಕಂಪ್ಯೂಟರ್ ಶಿಕ್ಷಣ ನೀಡುವವರನ್ನು ಬೆಸೆಯಲು ಶಿಕ್ಷಣ ಇಲಾಖೆ ಹೊಸ ಆ್ಯಪ್ ಅಭಿವೃದ್ಧಿ ಪಡಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ಇಂಡಸ್ ಇಂಡ್ ಬ್ಯಾಂಕ್ ಹಾಗೂ ಲರ್ನಿಂಗ್ ಲಿಂಕ್ಸ್ ವತಿಯಿಂದ ಆಯೋಜಿಸಿದ್ದ ಸಿಎಸ್ಆರ್ ನಿಧಿಯಡಿ ರೋಡ್ ಟು ಸ್ಕೂಲ್ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಆ್ಯಪ್ ಮೂಲಕ ತಮ್ಮ ಹೆಸರು ನೋಂದಾಯಿಸಿದರೆ ಅವರು ಬಯಸುವ ಶಾಲೆಯಲ್ಲಿ ಬೋಧನೆಗೆ ಅವಕಾಶ ನೀಡಲಾಗುವುದು. ಇದರಿಂದ ಸರ್ಕಾರಿ ಶಾಲಾ ಮಕ್ಕಳ ಗುಣಮಟ್ಟ ಸುಧಾರಿಸಲಿದೆ ಎಂದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಗೀಡಾದ ಶಾಲೆಗಳ ಮರು ನಿರ್ಮಾಣಕ್ಕೆ ಬೆಂಗಳೂರಿನ ಪಿಇಎಸ್ ಸಂಸ್ಥೆ ಕೈಜೋಡಿಸಿದ್ದು, 10 ಶಾಲೆಗಳನ್ನು ಕಟ್ಟಿಸಿಕೊಡಲಿದೆ. ಇಂತಹ ಕಾರ್ಯಕ್ಕೆ ಇನ್ನಷ್ಟು ಸಂಸ್ಥೆಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.