ಗದಗ: ಜಿಲ್ಲೆಯ ನರಗುಂದ ಮತ್ತು ರೋಣ ತಾಲ್ಲೂಕಿನಲ್ಲಿ ಸೋಮವಾರ ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಯಥಾಸ್ಥಿತಿಯಲ್ಲಿತ್ತು.
ನವಿಲುತೀರ್ಥ ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ 21 ಸಾವಿರದಿಂದ 8 ಸಾವಿರ ಕ್ಯುಸೆಕ್ಗೆ ತಗ್ಗಿದೆಯಾದರೂ ನೆರೆಯಿಂದ ನಡುಗಡೆಯಾಗಿರುವ ಕುರುವಿನಕೊಪ್ಪ ಮತ್ತು ಲಕಮಾಪುರ, ಬೂದಿಹಾಳ ಗ್ರಾಮಗಳಲ್ಲಿ ಮಾತ್ರ ನೀರು ಇನ್ನೂ ತಗ್ಗಿಲ್ಲ.
ಕೊಣ್ಣೂರು ಬಳಿ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಹಾಗೂ ಹೊಳೆಆಲೂರು–ಬಾದಾಮಿ ಸಂಪರ್ಕಿಸುವ ಸೇತುವೆ ಮೇಲೆ ನದಿ ನೀರು ಇನ್ನೂ ಹರಿಯುತ್ತಿರುವುದರಿಂದ ಮೂರನೇ ದಿನವೂ ವಾಹನ ಸಂಚಾರ ಬಂದ್ ಆಗಿತ್ತು.
ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮಂಗಳವಾರ ಸಂಜೆ ಒಳಗೆ ಪ್ರವಾಹ ಇಳಿದು, ಯಥಾಸ್ಥಿತಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.