ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸಾವಿರ ಕಾಳ್ಗಿಚ್ಚು ಪ್ರಕರಣ: ಲಾಕ್‌ಡೌನ್‌ ಅವಧಿಯಲ್ಲಿ ಸಂಚು

Last Updated 1 ಏಪ್ರಿಲ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ನಿಯಂತ್ರಿಸುವ ಸಲುವಾಗಿ ರಾಜ್ಯದಲ್ಲಿ 9 ದಿನಗಳಿಂದ ಲಾಕ್‌ಡೌನ್‌ ಪರಿಸ್ಥಿತಿ ಇದ್ದು, ಇದೇ ಅವಧಿಯಲ್ಲಿ 2 ಸಾವಿರ ಕಡೆಗಳಲ್ಲಿ ಕಾಳ್ಗಿಚ್ಚು ಪ್ರಕರಣಗಳೂ ನಡೆದಿವೆ!

ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಸಂಚಾರ ಕಡಿಮೆ ಇದ್ದು, ಇದನ್ನೇ ಬಳಸಿಕೊಳ್ಳುವ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ, ಬಳಿಕ ಕಾಡನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮಾರ್ಚ್‌ 21ರಿಂದ 30ರ ಅವಧಿಯಲ್ಲಿ ರಾಜ್ಯದ 1,777 ಸ್ಥಳಗಳಲ್ಲಿ ಕಾಳ್ಗಿಚ್ಚು ಕಾಣಿಸಿದ್ದರೆ, ಬುಧವಾರ ಒಂದೇ ದಿನ 300 ಸ್ಥಳಗಳಲ್ಲಿ ಕಾಳ್ಗಿಚ್ಚು ಕಾಣಿಸಿದೆ. ಬಹುತೇಕ ನಗರಗಳ ಅಂಚಿನಲ್ಲಿರುವ ಕಾಡುಗಳಲ್ಲೇ ಬೆಂಕಿ ಕಾಣಿಸಿರುವುದು ವಿಶೇಷವಾಗಿದ್ದು, ಕಾಡನ್ನು ಒತ್ತುವರಿ ಮಾಡುವ ಸಂಚು ಇದರ ಹಿಂದೆ ಇರುವುದು ಸ್ಪಷ್ಟ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಬಂಡೀಪುರ ಪ್ರದೇಶದಲ್ಲಿ ಕಾಳ್ಗಿಚ್ಚಿಗೆ 12 ಸಾವಿರ ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು. ಇಲಾಖೆಯ ಹಲವು ಲೋಪದೋಷಗಳು ಇದಕ್ಕೆ ಕಾರಣ ಎಂದು ಬಳಿಕ ಗೊತ್ತಾಗಿತ್ತು. ಈ ಬಾರಿಯೂ ಅಂತಹದಕ್ಕೆ ಅವಕಾಶ ನೀಡಬಾರದು, ವಾಯುಪಡೆಯ ನೆರವನ್ನೂ ಕೇಳಲಾಗಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್‌ ಹೇಳುತ್ತಿರುವಂತೆಯೇ 9 ದಿನಗಳಲ್ಲಿ 2 ಸಾವಿರಕ್ಕೂ ಅಧಿಕ ಕಾಳ್ಗಿಚ್ಚು ಪ್ರಕರಣಗಳು ನಡೆದಿವೆ.

ಒತ್ತುವರಿಗೆ ಬಿಡುವುದಿಲ್ಲ: ‘ಅರಣ್ಯಕ್ಕೆ ಬೆಂಕಿ ಹಚ್ಚಿ ಒತ್ತುವರಿ ಮಾಡಿಕೊಳ್ಳುವ ದುಷ್ಕರ್ಮಿಗಳ ಕನಸು ಈಡೇರದು, ಏಕೆಂದರೆ ಉಪಗ್ರಹ ಬಳಸಿ ಜಿಪಿಎಸ್‌ ಸಹಾಯದಿಂದ ಕಾಡು ನಾಶವಾದ ದೃಶ್ಯವನ್ನು ನೋಡುವಂತಹ ತಂತ್ರಜ್ಞಾನ ಬಂದಿದೆ, ಇದನ್ನು ಸಮರ್ಥವಾಗಿ ಬಳಸಲಾಗುತ್ತದೆ’ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT