ಮಡಿಕೇರಿ: ಕೊಡಗು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಗುರುವಾರವೂ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಗುಡ್ಡಗಾಡು ಪ್ರದೇಶದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲೆಯ ನಾಪೋಕ್ಲು, ಭಾಗಮಂಡಲ, ತಲಕಾವೇರಿ ಹಾಗೂ ಮಡಿಕೇರಿಯಲ್ಲಿ ಬುಧವಾರ ಬಿಡುವು ಕೊಟ್ಟು ಉತ್ತಮ ಮಳೆ ಸುರಿದಿದೆ. ಹಾರಂಗಿ ಜಲಾಶಯದ ಒಳಹರಿವು ಮತ್ತಷ್ಟು ಏರಿಕೆಯಾಗಿದ್ದು ಜಲಾಶಯದ ಭರ್ತಿಗೆ 11 ಅಡಿಯಷ್ಟೇ ಬಾಕಿಯಿದೆ.
ಗುಡ್ಡ ಕುಸಿದು ವಾಹನ ಸಂಚಾರ ಬಂದ್ ಆಗಿದ್ದ ಭಾಗಮಂಡಲ– ತಲಕಾವೇರಿ ರಸ್ತೆಯ ಚೇರಂಗಾಲದ ಬಳಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು ವಾಹನ ಸಂಚಾರ ಆರಂಭವಾಗಿದೆ. ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ ಪರಿಸ್ಥಿತಿ ನಿಭಾಯಿಸಲು ಹೋಂ ಗಾರ್ಡ್ಸ್ ನಿಯೋಜಿಸಲಾಗಿದೆ. ಮೋಟಾರ್ ಬೋಟ್ಗಳನ್ನು ಸನ್ನದ್ಧವಾಗಿ ಇಡಲಾಗಿದೆ.
ಭಾಗಮಂಡಲಕ್ಕೆ ಬುಧವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರಾ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.