ಮೈಸೂರು: ಯಾವ ಕಾರಣಕ್ಕೂ ತಾವು ಹುಣಸೂರು ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಶನಿವಾರ ಇಲ್ಲಿ ಹೇಳಿದರು.
‘ಟಿಕೆಟ್ ನೀಡುವ ವಿಷಯದಲ್ಲಿ ಊಹಾಪೋಹದ ಸುದ್ದಿ ಹರಿದಾಡುತ್ತಿದೆ. ಎರಡು ದಿನದ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಹೈಕಮಾಂಡ್ ಬಲಾಢ್ಯವಾಗಿದ್ದು, ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಸಭೆಯ ಈ ಹಿಂದಿನ ಸಭಾಧ್ಯಕ್ಷರು, ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಲಿದೆ ಎಂದ ವಿಶ್ವನಾಥ್, ‘ಈ ಪ್ರಕರಣವು ಸಂವಿಧಾನ ಪೀಠಕ್ಕೂ ಹೋಗಬಹುದು. ಕಾಯ್ದೆಯ ಬದಲಾವಣೆಗೆ, ಸುಧಾರಣೆಗೆ ಈ ಪ್ರಕರಣದಿಂದಲೇ ದೊಡ್ಡ ಉತ್ತರ ಸಿಗಲಿದೆ’ ಎಂದರು.