ಬೆಂಗಳೂರು: ಬಿಜೆಪಿ ಅತೃಪ್ತರ ಸಭೆ ಮತ್ತು ನಾಯಕತ್ವವನ್ನು ಪ್ರಶ್ನಿಸಿದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನರೇಂದ್ರಮೋದಿ ಪ್ರಧಾನಿಯಾಗಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದರು. ‘ನಾನೀನ ಕೊರೊನಾ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ಹಣವನ್ನು ಬಿಡುಗಡೆ ಮಾಡದೇ ರಾಜ್ಯವನ್ನು ನಿರ್ಲಕ್ಷಿಸಲಾಗಿದೆಯಲ್ಲವೆ ಎಂಬ ಪ್ರಶ್ನೆಗೆ, ಹಲವು ಸಂದರ್ಭಗಳಲ್ಲಿ ರಾಜ್ಯಕ್ಕೆ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಾಸ್ತಿ ಹಣ ಬಿಡುಗಡೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ತಿಳಿಸಿದರು.
‘ರಾಜ್ಯದಲ್ಲಿ ಕೊರೊನಾ ಪೀಡಿತರಿಗೆ ಯಾವುದೇ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವಂತಿಲ್ಲ. ಎಂತಹುದೇ ತುರ್ತು ಸಂದರ್ಭ ಬಂದರೂ ಚಿಕಿತ್ಸೆ ನೀಡಲೇಬೇಕು. ಈ ವಿಷಯದ ಬಗ್ಗೆ ದೂರುಗಳು ಬಂದಿವೆ. ಆ ಕುರಿತು ಗಮನಹರಿಸುತ್ತೇನೆ’ ಎಂದೂ ಅವರು ಹೇಳಿದರು.
ಮಹಾರಾಷ್ಟ್ರದಿಂದ ಬಂದವರಿಗೆ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದೇವೆ. ಉಳಿದ ರಾಜ್ಯಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ಗೆ ಸೂಚಿಸಿರುವುದಾಗಿಯೂ ಅವರು ತಿಳಿಸಿದರು.ಕೊರೊನಾ ನಿರ್ವ
ಹಣೆಗೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಕೊರತೆ ಇಲ್ಲ. ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವಷ್ಟು ಪಿಪಿಇ ಕಿಟ್ಗಳು ಸೇರಿದಂತೆ ಎಲ್ಲ ಬಗೆಯ ಉಪಕರಣಗಳೂ ಇವೆ ಎಂದು ಯಡಿಯೂರಪ್ಪ ಹೇಳಿದರು.