ಬೆಂಗಳೂರು: ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ. ಅವರು ಮೊದ್ಲು ಯಾವ ಪಕ್ಷದಲ್ಲಿ ಇದ್ರೂ ಅದೆಲ್ಲ ಸದ್ಯಕ್ಕೆ ಬೇಡ. ಅವರಿಗೆ ಮಂತ್ರಿ ಸ್ಥಾನ ಕೊಡಬಾರದು ಅಂತಾ ಒತ್ತಾಯ ಮಾಡ್ತಾ ಇದಾರೊ ಅಥವಾ ಅರಣ್ಯ ಇಲಾಖೆಯನ್ನು ಕೊಡಬಾರದು ಅಂತಾ ವಿರೋಧ ಮಾಡ್ತಾ ಇದಾರೊ ನಂಗೆ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಆನಂದ್ ಸಿಂಗ್ಗೆ ಅರಣ್ಯ ಖಾತೆ ಕೊಡಬಾರದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾವ ಖಾತೆ ಕೊಡಬೇಕು ಎನ್ನುವುದು ಸಿಎಂ ಯಡಿಯೂರಪ್ಪನವರ ಅಧಿಕಾರ. ಅದರ ಬಗ್ಗೆ ನಾನು ಕಮೆಂಟ್ ಮಾಡೊಕೆ ಹೋಗಲ್ಲ ಎಂದರು.
ಮಾರ್ಚ್ ಮೊದಲ ವಾರದಲ್ಲಿ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಮಾಡುತ್ತಿದ್ದೇವೆ. ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಮಾವೇಶ ಮಾಡುತ್ತಿದ್ದೇವೆ. ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮಹಿಳಾ ಸಂಘಟನೆ ಮಾಡುತ್ತಿದ್ದಾರೆ. ರೂತ್ ಮನೊರಮಾ ಅವರಿಗೆ ದೇಶ ವಿದೇಶದಲ್ಲಿ ಸಾಮಾಜಿಕ ಕೆಲಸ ಮಾಡಿರುವ ಅನುಭವ ಇದೆ. ಲೀಲಾವತಿ ಆರ್.ಪ್ರಸಾದ್ಗೆ ಅನಾರೋಗ್ಯದ ಕಾರಣ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಗಿ ಮುಂದುವರಿಯಲು ಸಾಧ್ಯ ಇಲ್ಲವೆಂದು ಹೇಳಿದ್ದಾರೆ. ಶಿಘ್ರದಲ್ಲೇ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದರು.
ಲಲಿತಾ ನಾಯ್ಕ್ ಸ್ವಂತ ಖರ್ಚಿನಲ್ಲಿ ಪಕ್ಷ ಸಂಘಟನೆ ಮಾಡಿದರು. ಕೆಲವು ಕಾರಣಾಂತರಗಳಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಆದರೆ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ನಾನು ಈಗ ರಾಜ್ಯಸಭೆಗೂ ಹೋಗುವ ಆಸಕ್ತಿ ಹೊಂದಿಲ್ಲ. ಹೀಗಾಗಿ ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇನೆ ಎಂದರು.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ದುಡಿಯಬೇಕೆಂಬ ಆಶಯ ಹೊಂದಿದ್ದೇನೆ. ಪಕ್ಷ ಕಟ್ಟುವ ಅನುಭವ ಇದೆ. ಸೋತರೂ, ಗೆದ್ದರೂ ಹೋರಾಟ ಮಾಡುತ್ತೇನೆ. ಆರ್. ಅಶೋಕ್ ಮಗನನ್ನು ರಕ್ಷಿಸುವಲ್ಲಿ ಪೋಲಿಸರ ಕೈವಾಡ ವಿಚಾರ ನನಗೆ ಗೊತ್ತಿಲ್ಲ. ನಾನು ಇಂತಹ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೋರಾಟ ಮಾಡುವುದಕ್ಕೆ ಅನೇಕ ವಿಷಯಗಳಿವೆ. ಅವುಗಳನ್ನು ಮುಂದಿಟ್ಟು ಹೋರಾಟ ಮಾಡುತ್ತೇನೆ. ನಾರಾಯಣ ಮೂರ್ತಿ ಅಳಿಯನ ಜೊತೆಯಲ್ಲಿ ಇನ್ನೂ ಇಬ್ಬರು ಅಮೆರಿಕ ದೇಶದ ಸಚಿವರಾಗಿರುವುದು ಸಂತೋಷದ ವಿಷಯ. ಅವರಿಗೆಲ್ಲ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.