ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬನವಾಸಿ ಕದಂಬೋತ್ಸವ ಮುಂದೂಡಿಕೆ -ಜಿಲ್ಲಾಧಿಕಾರಿ ಪ್ರಕಟಣೆ

ಸಾಂಸ್ಕೃತಿಕ ಉತ್ಸವದ ಮೇಲೆ ರಾಜಕೀಯ ಮೇಲಾಟದ ಕರಿನೆರಳು
Last Updated 4 ಫೆಬ್ರುವರಿ 2019, 7:48 IST
ಅಕ್ಷರ ಗಾತ್ರ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ, ತಾಲ್ಲೂಕಿನ ಬನವಾಸಿಯಲ್ಲಿ ಫೆ.9 ಮತ್ತು 10ರಂದು ನಡೆಯಬೇಕಾಗಿದ್ದ ರಾಜ್ಯ ಮಟ್ಟದ ಕದಂಬೋತ್ಸವವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೋಮವಾರ ಪ್ರಕಟಣೆ ಹೊರಡಿಸಿದ್ದಾರೆ.

‘ಉತ್ಸವ ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಿತ್ತು. ಬನವಾಸಿ ಮತ್ತು ಸಮೀಪದಲ್ಲಿ ಮಂಗಗಳು ಶಂಕಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ರೋಗ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿರುವುದರಿಂದ ಕದಂಬೋತ್ಸವನ್ನು ಮುಂದೂಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಕೀಯ ವಾಸನೆ ?:ಮಂಗನ ಕಾಯಿಲೆಯ ನೆಪದಲ್ಲಿ ಸಾಂಸ್ಕೃತಿಕ, ಐತಿಹಾಸಿಕ ಉತ್ಸವವೊಂದು ರಾಜಕೀಯ ಮೇಲಾಟಕ್ಕೆ ಬಲಿಯಾಗಿದೆ ಎಂದು ಬನವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉತ್ಸವದ ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿರುವ ದಿಢೀರ್ ಆಗಿ ಉತ್ಸವ ರದ್ದುಗೊಂಡಿರುವುದು ಅವರು ಅಸಮಾಧಾನಕ್ಕೆ ಕಾರಣವಾಗಿದೆ.

ಉತ್ಸವ ಆಚರಿಸುವ ಉತ್ಸಾಹದಲ್ಲಿದ್ದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಅವರು, ಉತ್ಸವ ಮುಂದೂಡಿಕೆಗೆ ಪೂರಕವಾಗಿ ನಾಲ್ಕಾರು ದಿನಗಳಿಂದ ನೀಡುತ್ತಿರುವ ಹೇಳಿಕೆ, ಬೇರೆ ಬೇರೆ ಸಂಘಟನೆಗಳ ಪ್ರಮುಖರ ಮೇಲೆ ಒತ್ತಡ ಹೇರಿ ಕೊಡಿಸುತ್ತಿರುವ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುವಂತಿವೆ.

ಶನಿವಾರ ಮುಂಡಗೋಡಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಶಾಸಕ ಹೆಬ್ಬಾರ್ ಅವರು, ‘ಬನವಾಸಿ ಸುತ್ತಮುತ್ತ ಮಂಗನ ಕಾಯಿಲೆ ಇರುವ ಕಾರಣ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೇ ಅಥವಾ ಉತ್ಸವ ನಡೆಸಬೇಕೇ ಎಂಬುದನ್ನು ಯೋಚಿಸಬೇಕಾಗಿದೆ. ಭಾಶಿಯಲ್ಲಿ 27 ಶಾಲಾ ಮಕ್ಕಳಿಗೆ ಮಂಗನ ಕಾಯಿಲೆ ಸೋಂಕು ತಗುಲಿತ್ತು. ಚಿಕಿತ್ಸೆ ಕೊಡಿಸಿ, ಗುಣಪಡಿಸಲಾಗಿದೆ’ ಎಂದು ಹೇಳಿ, ಜನರಲ್ಲಿ ಆತಂಕ ಹೆಚ್ಚಿಸಲು ಪ್ರಯತ್ನಿಸಿದ್ದರು.

‘ಭಾಶಿ ಶಾಲೆಯ ಮಕ್ಕಳಿಗೆ ಬಂದಿರುವುದು ಥಂಡಿ, ಜ್ವರವಾಗಿತ್ತು. ಅದು ಮಂಗನ ಕಾಯಿಲೆಯ ಜ್ವರ ಅಲ್ಲ’ ಎಂದು ಈ ಹಿಂದೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರೂ, ಶಾಸಕರು ಜನರನ್ನು ದಿಗಿಲುಗೊಳಿಸಲು ಪ್ರಯತ್ನಿಸಿದ್ದನ್ನು ಹಲವರು ಗುರುತಿಸಿದ್ದರು.

‘ಬನವಾಸಿ ಭಾಗದಲ್ಲಿ ಯಾರಿಗೂ ಮಂಗನ ಕಾಯಿಲೆಯ ಜ್ವರ ಬಂದಿಲ್ಲ. ಇಲ್ಲಿನ ಜನರಿಗೆ ಕಾಯಿಲೆಯ ಭಯವೂ ಇಲ್ಲ. ಜನರು ಗದ್ದೆ, ತೋಟ ಓಡಾಡಿಕೊಂಡು ನಿರಾಳವಾಗಿದ್ದಾರೆ. ಆದರೆ, ಜಿಲ್ಲೆಯಾದ್ಯಂತ ಬನವಾಸಿಯನ್ನು ಮಂಗನ ಕಾಯಿಲೆ ಪೀಡಿತ ಪ್ರದೇಶವೆಂದು ಬಿಂಬಿಸಿ, ಗೊಂದಲ ಸೃಷ್ಟಿಸಲಾಗಿದೆ. ಬನವಾಸಿಯಿಂದ 10 ಕಿ.ಮೀ ದೂರವಿರುವ ನರೂರಿನಲ್ಲಿ ಒಂದು ಮಂಗ ವೈರಸ್ ತಗುಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ, ಇಲ್ಲಿನ ಜನರಿಗೆ ಆರೋಗ್ಯ ಇಲಾಖೆ ಲಸಿಕೆ ನೀಡಿ, ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬನವಾಸಿಯಲ್ಲಿ ಮೃತಪಟ್ಟಿರುವ ಮಂಗವು ಕೆಎಫ್‌ಡಿ ವೈರಸ್‌ನಿಂದ ಸತ್ತಿದ್ದಲ್ಲ ಎಂಬ ವರದಿಯೂ ಬಂದಿದೆ. ಆದರೂ, ಉತ್ಸವ ಮುಂದೂಡಲು ಶಾಸಕರು ತೀವ್ರ ಆಸಕ್ತಿವಹಿಸಿದ್ದು ಅನುಮಾನ ಮೂಡಿಸಿದೆ’ ಎಂದು ಬನವಾಸಿಯ ಹಿರಿಯರೊಬ್ಬರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

ಶಾಸಕರ ನಡೆ ಏನು ?:ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರೆದುರು ಸದಾ ತೊಡೆತಟ್ಟಿ ನಿಲ್ಲುವ ಶಿವರಾಮ ಹೆಬ್ಬಾರ್, ಕದಂಬೋತ್ಸವ ಆಚರಣೆಯ ವಿಷಯದಲ್ಲಿ, ಅದೂ ಉತ್ಸವಕ್ಕೆ ಕೆಲವೇ ದಿನಗಳು ಇರುವಾಗ ‘ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರದಂತೆ ನಾನು ಮುಂದುವರಿಯುತ್ತೇನೆ’ ಎಂದು ಹೇಳಿಕೆ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.

ರಾಜ್ಯ ಸಮ್ಮಿಶ್ರ ಸರ್ಕಾರದ ಮುಂದಿನ ಅಧಿವೇಶನದ ಪೂರ್ವದಲ್ಲಿ ಅತೃಪ್ತ ಶಾಸಕರ ಜೊತೆ, ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿಗರು ನೀಡುತ್ತಿರುವ ಹೇಳಿಕೆಯ ನಂತರ ಹೆಬ್ಬಾರ್ ಅವರು ಕದಂಬೋತ್ಸವ ಮುಂದೂಡಲು ವಿಶೇಷ ಕಾಳಜಿ ವಹಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಚರ್ಚಿತ ಸಂಗತಿ.

‘ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಾಗಿನಿಂದ ಹೆಬ್ಬಾರ್ ಅವರ ಹಾವು–ಏಣಿಯಾಟದ ನಡೆ ನಮಗೆ ತೀವ್ರ ಮುಜುಗರ ಉಂಟುಮಾಡಿದೆ. ಜನರನ್ನು ನಿತ್ಯ ಭೇಟಿಯಾಗುವ ನಮಗೆ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ. ಸಾಂಸ್ಕೃತಿಕ ಉತ್ಸವವೊಂದನ್ನು ಶಾಸಕರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’ ಬನವಾಸಿಯ ಕಾಂಗ್ರೆಸ್ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT