ಬೆಂಗಳೂರು: ಎಲ್ಲ ಸಚಿವರೂ ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿ, ಅಹವಾಲುಗಳನ್ನು ಆಲಿಸುವಂತೆ ಸೂಚನೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.
ಕೆಲವು ಸಚಿವರು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಆಲೋಚನೆ ನಡೆಸಿದ್ದಾರೆ. ಪ್ರತಿ ಸೋಮವಾರ ಮತ್ತು ಗುರುವಾರದಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕೆಲವು ಗಂಟೆಗಳನ್ನು ಇದಕ್ಕಾಗಿ ಮೀಸಲಿಡಲು ಸೂಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಉಪಚುನಾವಣೆ ಮುಗಿದು, ಬಿಜೆಪಿ ಬಹುಮತ ಗಳಿಸಿದೆ. ಸರ್ಕಾರ ಅನಿಶ್ಚಿತತೆಯ ತೂಗುಗತ್ತಿಯಿಂದ ಪಾರಾ ಗಿದೆ. ಇನ್ನು ಮೂರೂವರೆ ವರ್ಷ ಗಳು ಜನಪರ ಆಡಳಿತ ನೀಡಬೇಕು ಮತ್ತು ಸರ್ಕಾರ ಜನಸ್ನೇಹಿ ಎಂಬ ಹೆಸರು ಗಳಿಸಬೇಕು. ಇದಕ್ಕಾಗಿ ಎಲ್ಲ ಶಾಸಕರೂ ಸಿದ್ಧರಾಗಬೇಕು ಎಂಬ ಆಲೋಚನೆ ಯಡಿಯೂರಪ್ಪ ಅವರದು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ, ‘ಮುಖ್ಯಮಂತ್ರಿ ಅವರಿಂದ ಈವರೆಗೂ ಸೂಚನೆ ಬಂದಿಲ್ಲ. ಆದರೆ, ನಾನಂತೂ ವಾರದ ಎಲ್ಲ ದಿನಗಳೂ ವಿಧಾನಸೌಧ ದಲ್ಲಿ ಇದ್ದು ಕೆಲಸ ಮಾಡುತ್ತೇನೆ. ಯಾರೂ ಬರುವುದಿಲ್ಲವೊ ಅವರಂತೂ ಬರಲೇಬೇಕಾಗುತ್ತದೆ’ ಎಂದರು.
‘ವಾರದಲ್ಲಿ ಒಂದು ದಿನ ಸಾರ್ವ ಜನಿಕರ ಭೇಟಿಗೂ, ವಾರದಲ್ಲಿ ಎರಡು ದಿನಗಳು ತಲಾ 2 ಗಂಟೆ ಅವಧಿಯನ್ನು ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಅಧ್ಯಕ್ಷರು ಅಥವಾ ಸದಸ್ಯರ ಭೇಟಿಗೆ ಸಮಯ ನಿಗದಿ ಮಾಡಿದ್ದೇನೆ. ಆ ಸಮಯದಲ್ಲಿ ಬಂದು ಭೇಟಿ ಮಾಡಿ, ತಮ್ಮ ದೂರು, ದುಮ್ಮಾನಗಳನ್ನು ಹೇಳಿಕೊಳ್ಳಬಹುದಾಗಿದೆ’ ಎಂದರು.