ಕಲಬುರ್ಗಿ: ರಾಜ್ಯದಲ್ಲಿರುವ ಅನಗತ್ಯ ಇಲಾಖೆಗಳನ್ನು ರದ್ದು ಮಾಡುವ ಅಥವಾ ಪ್ರಮುಖ ಇಲಾಖೆಗಳಲ್ಲಿ ವಿಲೀನ ಮಾಡುವ ಮೂಲಕ ಅಲ್ಲಿರುವ ಸಿಬ್ಬಂದಿಯನ್ನು ಅಗತ್ಯವಿರುವಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಅವರಿಗೆ ಹೆಚ್ಚು ಕೆಲಸ ಇಲ್ಲ. ಅವರನ್ನು ಅಗತ್ಯವಿರುವ ಕಂದಾಯ ಇಲಾಖೆಯ ಇತರ ಶಾಖೆಗಳಿಗೆ ನಿಯೋಜಿಸಲಾಗುವುದು’ ಎಂದರು.
ಗ್ರಾಮವಾಸ್ತವ್ಯ, ಅಂಗನವಾಡಿ ಊಟ: ‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಪ್ರತಿ ತಿಂಗಳು ಗ್ರಾಮವೊಂದಕ್ಕೆ ಭೇಟಿ ನೀಡಿ ಇಡೀ ದಿನ ಅಲ್ಲೇ ಇರಬೇಕು. ಅಲ್ಲಿನ ಅಂಗನವಾಡಿಯಲ್ಲಿಯೇ ಊಟ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲಿನ ಜನರ ಸಮಸ್ಯೆ ಅರಿಯಲು ಇದು ಸಹಕಾರಿಯಾಗುತ್ತದೆ’ ಎಂದರು.