ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಶನಿವಾರ(ಆ.31) ಚುನಾವಣೆ ನಡೆಯಲಿದ್ದು, ಜೆಡಿಎಸ್ ಶಾಸಕಎಚ್.ಡಿ.ರೇವಣ್ಣ ಮತ್ತು ಬಿಜೆಪಿ ಶಾಸಕಬಾಲಚಂದ್ರ ಜಾರಕಿಹೊಳಿ ನಡುವೆ ನೇರ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ.
ಕಾಂಗ್ರೆಸ್ ಶಾಸಕಭೀಮಾ ನಾಯ್ಕ್ ಅವರು ಸಹ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ಬಳಿಕ ಉದ್ಭವಿಸಿದ ಸನ್ನಿವೇಶಗಳು, ಲೆಕ್ಕಾಚಾರಗಳ ಕಾರಣ ರೇವಣ್ಣ–ಬಾಲಚಂದ್ರ ಜಾರಕಿಹೊಳಿ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧವಾಗಬಹುದು ಎಂದು ಹೇಳಲಾಗುತ್ತಿದೆ.
ಮಂಡ್ಯದ ಒಬ್ಬ ನಿರ್ದೇಶಕರನ್ನು ಹೊರತುಪಡಿಸಿ, ತುಮಕೂರು ಸಹಿತ ಇತರ ಎಲ್ಲ ಹಾಲು ಒಕ್ಕೂಟಗಳ ನಿರ್ದೇಶಕರು, ಸರ್ಕಾರದ ನಾಮನಿರ್ದೆಶಿತ ನಿರ್ದೇಶಕರು, ಅಧಿಕಾರಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.