ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಮುಖಭಂಗಕ್ಕೆ ಯತ್ನ: ದೇವೇಗೌಡ

ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ; ಸಿದ್ದರಾಮಯ್ಯ ಬಂದರೂ ಬಗೆಹರಿಯಲ್ಲ– ದೇವೇಗೌಡ
Last Updated 4 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮಂಡ್ಯ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮುಖಭಂಗ ಮಾಡಲೆಂದೇ ಹಲವರು ಪಣ ತೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಸಿದ್ದರಾಮಯ್ಯ ಬಂದರೂ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಜಿಲ್ಲೆಯ ಮೈತ್ರಿ ಬೇಗುದಿಯನ್ನು ಗುರುವಾರ ಬಣ್ಣಿಸಿದರು.

ಕೆ.ಆರ್‌.ಪೇಟೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪ್ರಚಾರದ ಸಲುವಾಗಿ ನಡೆದ ಬಹಿರಂಗ ಸಭೆಯಲ್ಲಿ ಮತನಾಡಿದರು.

‘ಈಗಾಗಲೇ ಬಹಳಷ್ಟು ಮಂದಿ ದೂರ ಸಾಗಿದ್ದಾರೆ. ಅವರ ಮನೆ ಬಾಗಿಲಿಗೆ ನಾವು ಹೋಗುವುದಿಲ್ಲ. ಆದರೆ ಜನರ ಬಳಿಗೆ ಹೋಗುತ್ತೇವೆ. ಅವರೇ ನಮ್ಮ ಬಂಧು ಬಾಂಧವರು. ರಾಜಕುಮಾರನಿಗಿಂತ ದೊಡ್ಡ ನಟನಿಲ್ಲ. ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಸ್ಪರ್ಧೆ ಮಾಡುವಂತೆ ಕೋರಿ ರಾಜ್‌ಕುಮಾರ್‌ ಮನೆಗೆ ಹೋಗಿದ್ದೆವು. ಆದರೆ ಆ ನಟ ಒಪ್ಪಲಿಲ್ಲ. ನಾನು ಸಿನಿಮಾದವರ ಬಗ್ಗೆ ಮಾತನಾಡುವುದಿಲ್ಲ. ಸಿನಿಮಾದವರನ್ನು ಈ ಜಿಲ್ಲೆ ಹಲವು ಬಾರಿ ಗೆಲ್ಲಿಸಿದೆ. ಅದರಿಂದ ಏನು ಲಾಭವಾಗಿದೆ ಎಂಬುದನ್ನು ಆಲೋಚಿಸಬೇಕು’ ಎಂದು ಹೇಳಿದರು.

‘15 ತಿಂಗಳು ಮುಖ್ಯಮಂತ್ರಿ ಆಗಿದ್ದೆ, ಹತ್ತೂವರೆ ತಿಂಗಳು ಪ್ರಧಾನಿಯಾಗಿದ್ದೆ. ಒಂದು ಕಾಲದಲ್ಲಿ ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದೆ. ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ ಎಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದೆ. ನನ್ನ ರಾಜಕೀಯ ಜೀವನದಲ್ಲಿ ತುಂಬಾ ನೋವಿನ ಊಟ ಉಂಡಿದ್ದೇನೆ. ಈಗ ಎಲ್ಲಿ ನೋಡಿದರೂ ಮೋದಿ, ಶಾ ಎನ್ನುತ್ತಿದ್ದಾರೆ. ಏನು ಅವರ ಅಬ್ಬರ, ಆರ್ಭಟ. ಈ ಭಾರತಾಂಬೆ ಅವರನ್ನು ಎದುರಿಸುವ ನಾಯಕರನ್ನು ಹುಟ್ಟಿಸಿದ್ದಾಳೆ’ ಎಂದರು.

ಕೃಷ್ಣ ವಿರುದ್ಧ ವಾಗ್ದಾಳಿ: ‘ನನ್ನ ಮಗ ಕದ್ದು ಹೋಗಿ ಮುಖ್ಯಮಂತ್ರಿಯಾದ ಎಂದು ಎಸ್‌.ಎಂ.ಕೃಷ್ಣ ಹೇಳಿದ್ದಾರೆ. 2004ರಲ್ಲಿ ಮುಖ್ಯಮಂತ್ರಿ ಮಾಡಿ ಎಂದು ಈ ಕೃಷ್ಣ ಬಂದಿದ್ದರು, ನಾನು ಆಗಲ್ಲ ಎಂದೆ. ಸೋನಿಯಾ ಗಾಂಧಿ ಕೂಡ ಒಪ್ಪಲಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ ನಮಗೆ ಕಡಿಮೆ ಸ್ಥಾನ ಬಂದಿದ್ದ ಕಾರಣ ಧರ್ಮಸಿಂಗ್ ಮುಖ್ಯಮಂತ್ರಿ ಆದರು’ ಎಂದು ನೆನಪಿಸಿಕೊಂಡರು.

‘ನನ್ನ ಆತ್ಮಚರಿತ್ರೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಬೇಕಾಗಿತ್ತು. ಚುನಾವಣೆ ಲಾಭಕ್ಕಾಗಿ ಬಿಡುಗಡೆ ಮಾಡಿದರು ಎನ್ನುತ್ತಾರೆ ಎಂಬ ಕಾರಣಕ್ಕೆ ನಾನೇ ತಡೆದಿದ್ದೇನೆ’ ಎಂದರು.

ಕಾಂಗ್ರೆಸ್‌ ಮೇಲೆ ಗೌರವ: ಶ್ರೀರಂಗಪಟ್ಟಣದಲ್ಲಿ ಮಾತನಾಡಿ, ‘ನನಗೆ ಕಾಂಗ್ರೆಸ್‌ ಪಕ್ಷದ ಮೇಲೆ ಗೌರವ ಇದೆ. ನಾನು ಪ್ರಧಾನಿ ಹುದ್ದೆ ಕಳೆದುಕೊಂಡರೂ ಕಾಂಗ್ರೆಸ್‌ ಬಗೆಗಿನ ಗೌರವ ಹಾಗೆಯೇ ಇದೆ. ಆದರೆ ಇಂದಿನ ರಾಜಕೀಯ ಸ್ಥಿತಿ ನೋಡಿ ನೋವು ಅನುಭವಿಸುತ್ತಿದ್ದೇನೆ’ ಎಂದು ತಿಳಿಸಿದರು.

ತಾಕತ್ತಿದ್ದರೆ ಕ್ರಮ ಕೈಗೊಳ್ಳಿ’

ಮಂಡ್ಯ: ‘ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ತಿರುಗಿ ಬಿದ್ದಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ನಮ್ಮನ್ನು ಜೈಲಿಗೆ ಕಳುಹಿಸಿದರೂ ಸುಮಲತಾ ಪರ ಕಾಂಗ್ರೆಸ್‌ ಧ್ವಜ ಪ್ರದರ್ಶಿಸಿ ಪ್ರಚಾರ ನಡೆಸುತ್ತೇವೆ. ತಾಕತ್ತು ಇದ್ದರೆ ಕ್ರಮ ಕೈಗೊಳ್ಳಿ’ ಎಂದು ಸವಾಲು ಹಾಕಿದರು.

ಉಚ್ಛಾಟಿತ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ನಿವಾಸದಲ್ಲಿ ಗುರುವಾರ ಸಭೆ ನಡೆಸಿದ ಮುಖಂಡರು, ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್ ಧ್ವಜ ಪ್ರದರ್ಶಿಸದಂತೆ ಎಚ್ಚರಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಮುಖಂಡರ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ನಾವು ಸ್ವಾಭಿಮಾನಿಗಳು, ಎಷ್ಟೇ ಎಚ್ಚರಿಕೆ ಕೊಟ್ಟರೂ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ. ಸುಮಲತಾ ಪರ ನಿಲ್ಲುತ್ತೇವೆ. ಕಾರ್ಯಕರ್ತರಿಂದ ಕಾಂಗ್ರೆಸ್‌ ಪಕ್ಷವಿದೆ. ಬಾವುಟ ಹಿಡಿಯಬೇಡಿ ಎನ್ನಲು ನೀವ್ಯಾರು. ನಾವೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡಲು ಸಿದ್ಧರಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಭಾವುಕರಾದರು...

‘ಕೆಲವರು ನನ್ನನ್ನು , ಕುಮಾರಸ್ವಾಮಿಯನ್ನು ಹೀನಾಮಾನವಾಗಿ ನಿಂದಿಸುತ್ತಿದ್ದಾರೆ, ಬೇಸರವಿಲ್ಲ. ಆದರೆ ನನ್ನ ಮತ್ತೊಂದು ಕಣ್ಣಾದ ಮಂಡ್ಯ ಜನ ಆ ಮಾತಿಗೆ ಬೆಂಬಲ ನೀಡುವುದು ಯಾವ ನ್ಯಾಯ’ ಎಂದು ಪ್ರಶ್ನಿಸುತ್ತಾ ದೇವೇಗೌಡರು ಭಾವುಕರಾದರು. ಅಳು ತಡೆದು ಮಾತು ಮುಂದುವರಿಸಿದರು.

‘ಕುಮಾರಸ್ವಾಮಿಯನ್ನು ಬಗ್ಗು ಬಡಿಯಲು ಎಲ್ಲಾ ವಿರೋಧಿಗಳು ಒಂದಾಗಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳ ಆಸೆ ಈಡೇರುವುದಿಲ್ಲ. ನಿಖಿಲ್ ನಿಲ್ಲುವುದು ಬೇಡ ಎಂದು ಸೂಚ್ಯವಾಗಿ ಹೇಳಿದ್ದೆ. ಆದರೆ ಇಲ್ಲಿನ ಎಂಟೂ ಕ್ಷೇತ್ರದ ಶಾಸಕರು ಒತ್ತಾಯ ಮಾಡಿ ಕಣಕ್ಕಿಳಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT