ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರನ ಸೋಲು ನೆನೆದು ಬಿಕ್ಕಿಬಿಕ್ಕಿ ಅತ್ತ ಕುಮಾರಸ್ವಾಮಿ

ನಾರಾಯಣಗೌಡ ಬಾಂಬೆ ಕಳ್ಳ ಎಂದರೂ ಜೆಡಿಎಸ್ ಟಿಕೆಟ್ ನೀಡಿದ್ದೆ: ಎಚ್.ಡಿ ಕುಮಾರಸ್ವಾಮಿ
Last Updated 27 ನವೆಂಬರ್ 2019, 12:34 IST
ಅಕ್ಷರ ಗಾತ್ರ

ಕಿಕ್ಕೇರಿ(ಮಂಡ್ಯ):'2013ರಲ್ಲಿನಾರಾಯಣಗೌಡ ಬಾಂಬೆ ಕಳ್ಳ, ಟಿಕೆಟ್‌ ನೀಡುವುದು ಬೇಡ ಎಂದರು.ಆದರೂ ಟಿಕೆಟ್ ನೀಡಿದೆ'ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಪುತ್ರನ ಸೋಲು ನೆನೆದು ಕಣ್ಣೀರಿಟ್ಟರು.

2018ರಲ್ಲಿ ನಮ್ಮ ತಂದೆಯ ವಿರೋಧದ ನಡುವೆಯೂ ಟಿಕೆಟ್‌ ಕೊಟ್ಟು ಗೆಲ್ಲಿಸಿದೆ. ನಾನು ಬಜೆಟ್‌ ಸಿದ್ಧತೆಯಲ್ಲಿದ್ದಾಗ ಬಿಜೆಪಿಯವರಿಂದ ಹಣ ಪಡೆದು ಬಾಂಬೆಯಲ್ಲಿ ಚಿಕಿತ್ಸೆಯ ನಾಟಕವಾಡಿಆಸ್ಪತ್ರೆಯಲ್ಲಿ ಮಲಗಿದ್ದ’ ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವಎಚ್‌.ಡಿ.ಕುಮಾರಸ್ವಾಮಿ ಬುಧವಾರ ಪಟ್ಟಣದಲ್ಲಿ ನಡೆದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಪುತ್ರ ಕೆ.ನಿಖಿಲ್‌ ಸೋಲು ನೆನೆದು ಭಾವುಕರಾದರು.

‘ಮಂಡ್ಯ ಜಿಲ್ಲೆಯ ಜನರ ಪ್ರೀತಿಯೇ ಇಲ್ಲದ ಮೇಲೆ ಅಧಿಕಾರದಲ್ಲಿ ಇರಬೇಕಾ? ಜನರೇ ಕೈಬಿಟ್ಟ ನಂತರ ಅಧಿಕಾರ ಯಕಶ್ಚಿತ್‌. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ನನ್ನನ್ನು ಗುಲಾಮನ ರೀತಿಯಲ್ಲಿ ನಡೆಸಿಕೊಂಡರು. ನಾನೇನು ತಪ್ಪು ಮಾಡಿದ್ದೆ, ನೀವೇಕೆ ನನ್ನ ಕೈಬಿಟ್ಟಿರಿ’ ಎಂದು ಬಿಕ್ಕಿಬಿಕ್ಕಿ ಅಳುತ್ತಾ ಪ್ರಶ್ನಿಸಿದರು.

‘ಮಗನ ಸೋಲಿಗಾಗಿ ನಾನು ಅಳುತ್ತಿಲ್ಲ. ಜಿಲ್ಲೆಯ ಹೆಣ್ಣು ಮಕ್ಕಳ ಸ್ಥಿತಿ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದೆ. ಈಗ ಅದು ನೀರಾಗಿ ಬರುತ್ತಿದೆ. ನನ್ನ ಮಗನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಬೇಕು ಅಂದುಕೊಂಡಿರಲಿಲ್ಲ. ನಾನು ಸಾಲ ಮನ್ನಾ ಮಾಡಿದ್ದೇ ತಪ್ಪಾ’ ಎಂದು ಪ್ರಶ್ನಿಸಿ ಮತ್ತೆ ಕಣ್ಣೀರಾದರು.

ಸರ್ಕಾರ ಸ್ಥಿರವಾಗಿರುತ್ತೆ ಎಂದು ಹೇಳಿಲ್ಲ: ‘ಬಿಜೆಪಿ ಸರ್ಕಾರ ಸ್ಥಿರವಾಗಿ ಇರುತ್ತದೆ ಎಂದು ನಾನು ಎಲ್ಲೂ ಹೇಳಿಲ್ಲ. ಸರ್ಕಾರ ಸ್ಥಿರವಾಗಿರಲಿದೆ ಎಂದಷ್ಟೇ ಹೇಳಿದ್ದೇನೆ. ಆದರೆ ಅದು ಯಾವ ಸರ್ಕಾರ ಎಂದು ಹೇಳಿಲ್ಲ. ಡಿ.9ರ ನಂತರ ಅದು ಯಾವ ಸರ್ಕಾರ ಎಂಬುದು ತಿಳಿಯಲಿದೆ. ರಾಜ್ಯ ರಾಜಕಾರಣ ಶುದ್ಧವಾಗಲಿದೆ’ ಎಂದರು.

ಷರತ್ತು ಹಾಕಿದ್ದರು: ಸಂತೇಬಾಚಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ಕಾಲದ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಸಮ್ಮಿಶ್ರ ಸರ್ಕಾರದಲ್ಲಿ ಷರತ್ತು ವಿಧಿಸಿದ್ದರು. 3 ಕೆ.ಜಿ ಅಕ್ಕಿ ಹೆಚ್ಚಿಗೆ ಮಾಡಿದ್ದ ಕಾರಣ ನಾನು ₹ 800 ಕೋಟಿ ಹೊಂದಿಸಬೇಕಾಗಿತ್ತು. ಸಾಲ ಮನ್ನಾ ವಿಚಾರವಾಗಿ ಯಡಿಯೂರಪ್ಪ ಬೈದರು. ಆದರೂ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನಾನು ನಿಮಗೆ ದ್ರೋಹ ಮಾಡಿದ್ದೇನಾ’ ಎಂದು ಪ್ರಶ್ನಿಸಿದರು.

‘ಪ್ರವಾಹ ಪೀಡಿತರಿಗಾಗಿ ಯಡಿಯೂರಪ್ಪ ಪ್ರಾಣ ಬಿಡುತ್ತೇನೆ ಎಂದರೆ ಒಪ್ಪಬಹುದಾಗಿತ್ತು. ಆದರೆ ಅನರ್ಹ ಶಾಸಕರಿಗೆ ಪ್ರಾಣ ಬಿಡುತ್ತೇನೆ ಎನ್ನುತ್ತಿದ್ದಾರೆ. ಅವರು ಲಿಂಗಾಯತರಿಗೆ ಕರೆ ನೀಡಿದ ರೀತಿಯಲ್ಲಿ ಒಕ್ಕಲಿಗರು ನನ್ನ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಹೇಳಲು ಸಾಧ್ಯವೇ. ಉತ್ತರ ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯ ಆರಂಭಿಸಿದ್ದೆ, ಇವನನ್ನು ಹೀಗೆ ಬಿಟ್ಟರೆ ನಮ್ಮನ್ನು ಮುಗಿಸುತ್ತಾನೆ ಎಂದುಕೊಂಡು ಕಾಂಗ್ರೆಸ್‌, ಬಿಜೆಪಿಯವರು ಕೆಳಗಿಳಿಸಿದರು’ ಎಂದರು.

ಕೆ.ಆರ್‌.ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ

ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ ‘ನಾರಾಯಣಗೌಡ ಗೆದ್ದರೆ ಕೆ.ಆರ್‌.ಪೇಟೆಯನ್ನು ಮುಂಬೈ ಮಾಡುವುದಿಲ್ಲ, ಕಾಮಾಟಿಪುರ ಮಾಡುತ್ತಾರೆ. ಮುಂಬೈ ಮಾಡುತ್ತೇನೆ ಎಂಬುದೆಲ್ಲಾ ಸುಳ್ಳು’ ಎಂದರು.ಶಾಸಕ ಎಚ್‌.ಡಿ.ರೇವಣ್ಣ, ಕುಮಾರಸ್ವಾಮಿ ಇಲ್ಲ ಎಂದಿದ್ದರೆ ನಾರಾಯಣಗೌಡ, ಗೋಪಾಲಯ್ಯನಂಥವರು ಜೈಲಿನಲ್ಲಿರಬೇಕಿತ್ತು ಎಂದರು.

ಎಚ್‌ಡಿಕೆ ಹೇಳಿದ ಬೀಡಿ ಕತೆ

‘ಬೀಡಿ ಸೇದಿದರೆ ನಾಯಿಕಚ್ಚಲ್ಲ, ಕಳ್ಳರು ಬರಲ್ಲ ಎನ್ನುತ್ತಾ ಒಬ್ಬ ಒಂದೂರಲ್ಲಿ ಬೀಡಿ ಮಾರುತ್ತಿದ್ದ. ಬೀಡಿ ಸೇದಿದ ಜನರೆಲ್ಲಾ ರಾತ್ರಿ ಹೊತ್ತಲ್ಲಿ ಕೆಮ್ಮುತ್ತಿದ್ದರಂತೆ, ಬೆನ್ನು ಗೂನಾಗಿ ದೊಣ್ಣೆ ಹಿಡಿದು ಓಡಾಡುತ್ತಿದ್ದರಂತೆ. ಆಗ ನಾಯಿಗಳು ಹತ್ತಿರ ಸುಳಿಯಲಿಲ್ಲ, ಕಳ್ಳರೂ ಬರಲಿಲ್ಲ. ಅನರ್ಹ ಶಾಸಕರ ಕತೆಯೂ ಇದೇ ಆಗಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT