ಮಡಿಕೇರಿ: ಕೊರೊನಾ ವೈರಸ್ ಕಾರ್ಮಿಕರ ಬದುಕಿನ ಮೇಲೂ ಕರಿನೆರಳು ಬೀರಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ದುಡಿಮೆಗೆ ಬಂದಿದ್ದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ತಮ್ಮ ಸ್ವಗ್ರಾಮಕ್ಕೆ ಮರಳಲೂ ಸಾಧ್ಯವಾಗುತ್ತಿಲ್ಲ.
ಏ.14ರ ವರಗೆ ಲಾಕ್ಡೌನ್ ಘೋಷಿಸಿರುವುದರಿಂದ ಹೊರ ಜಿಲ್ಲೆಗಳಿಂದ ಎಸ್ಟೇಟ್ಗಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಸಾವಿರಾರು ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ.
ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ಸುಮಾರು 62 ಜನರನ್ನು ಸೋಮವಾರಪೇಟೆಯ ಚೆಕ್ಪೋಸ್ಟ್ ಬಳಿ ಪೊಲೀಸರು ತಡೆದು ಹೋಂ ಕ್ವಾರಂಟೈನ್ನಲ್ಲಿ ನಿಗಾ ಇಡಲಾಗಿದೆ. ಎಲ್ಲ ಕಾರ್ಮಿಕರನ್ನೂ ಮಡಿಕೇರಿಯ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಇಟ್ಟು ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ರಾಯಪುರ ಗ್ರಾಮದಿಂದ ಕೊಡಗಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಇಷ್ಟೂ ಕಾರ್ಮಿಕರೂ ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದ ಹುಟ್ಟೂರಿಗೆ ವಾಪಸ್ ತೆರಳಲು ಮುಂದಾಗಿದ್ದರು. ಗಂಟು ಮೂಟೆ ಕಟ್ಟಿಕೊಂಡು ಲಾರಿಯಲ್ಲಿ ಪ್ರಯಾಣ ಬೆಳೆಸಿದ್ದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೋಲಿಸರು, ಸೋಮವಾರಪೇಟೆ ಚೆಕ್ಪೋಸ್ಟ್ನಲ್ಲಿ ಬಳಿ ತಡೆದು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಒದಗಿಸಿದ್ದಾರೆ. ಅಲ್ಲದೇ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.