ಪಾಂಡವಪುರ: ‘ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈಗ ಮಾತನಾಡುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಸದಿದ್ದರೆ ಮೋದಿ ನಿದ್ರಿಸಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಆದರೆ, ಇಬ್ಬರಿಗೂ ರೈತರ ಬಗ್ಗೆ ಕಳಕಳಿ ಇದ್ದಂತಿಲ್ಲ. ಇವೆಲ್ಲಾ ಚುನಾವಣೆ ಗಿಮಿಕ್’ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದರು.
ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲುವಿನಲ್ಲಿ ಭಾನುವಾರ ರಾಜ್ಯ ರೈತ ಸಂಘ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ, ಕೆ.ಎಸ್.ಪುಟ್ಟಣ್ಣಯ್ಯ ಪುತ್ಥಳಿ ಅನಾವರಣ ಹಾಗೂ ಕಾಯಕ ಪ್ರಶಸ್ತಿ ಸಮಾರಂಭ ಉದ್ಫಾಟಿಸಿ ಅವರು ಮಾತನಾಡಿದರು.
ಪಂಚರಾಜ್ಯ ಚುನಾವಣೆ ಬಳಿಕ ಸಾಲಮನ್ನಾ ಕುರಿತು ಪ್ರಧಾನಿ ಚಿಂತಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಒದಗಿಸುವುದೇ ರೈತರ ಸಮಸ್ಯೆಗಳಿಗೆ ನೀಡಬಹುದಾದ ಶಾಶ್ವತ ಪರಿಹಾರ ಕ್ರಮ’ ಎಂದು ಅವರು ಪ್ರತಿಪಾದಿಸಿದರು.
‘ಈಗ ರೈತರ ಬಗ್ಗೆ ಮಾತನಾಡುವವರು ರೈತರ ನಾಯಕರಲ್ಲ. ಪ್ರೊ.ಎಂ.ಡಿ.ನಂಜುಂಡ ಸ್ವಾಮಿ, ಮಹಾರಾಷ್ಟ್ರದ ಶರದ್ ಜೋಶಿ, ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಟಿಕಾಯತ್, ಕೆ.ಎಸ್.ಪುಟ್ಟಣ್ಣಯ್ಯ ನಿಜವಾದ ರೈತ ನಾಯಕರು’ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ‘ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಬೇಕು. ರೈತ ಸಂಘ ಮತ್ತು ಸ್ವರಾಜ್ ಇಂಡಿಯಾ ಸ್ಪರ್ಧೆ ಮಾಡದೇ ಬಿಜೆಪಿ ಸೋಲಿಸಲು ಕೈಜೋಡಿಸಬೇಕಿದೆ’ ಎಂದರು.
ಸಾಹಿತಿ ದೇವನೂರ ಮಹಾದೇವ, ರೈತ ಸಂಘದ ಚಾಮರಸ ಮಾಲಿಪಾಟೀಲ್, ಕೆ.ಟಿ.ಗಂಗಾಧರ್, ಬಡಗಲಪುರ ನಾಗೇಂದ್ರ, ದರ್ಶನ್ ಪುಟ್ಟಣ್ಣಯ್ಯ, ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರೆಗೋಡು ಇದ್ದರು.
*ರೈತರ ಬವಣೆ ಹಾಗೂ ನಿರುದ್ಯೋಗ ವಿಚಾರದ ಮೇಲೆಯೇ 2019ರ ಲೋಕಸಭಾ ಚುನಾವಣೆ ನಡೆಯಲಿದೆ -ಯೋಗೇಂದ್ರ ಯಾದವ್,ರಾಷ್ಟ್ರೀಯ ಅಧ್ಯಕ್ಷ, ಸ್ವರಾಜ್ ಇಂಡಿಯಾ ಪಕ್ಷ