ಮಂಗಳೂರು: ದುಬೈನಿಂದ ನಗರಕ್ಕೆ ಬಂದಿದ್ದ ಭಟ್ಕಳದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ವ್ಯಕ್ತಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ವ್ಯಕ್ತಿಯ ಗಂಟಲು ದ್ರವದ ಮಾದರಿ ವರದಿ ಬಂದಿದ್ದು, ಕೋವಿಡ್-19 ದೃಢಪಟ್ಟಿದೆ.
ಇದೇ 19 ರಂದು ನಗರಕ್ಕೆ ಬಂದಿದ್ದ ಈ ವ್ಯಕ್ತಿಯನ್ನು ವಿಮಾನ ನಿಲ್ದಾಣದಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಕೊರೊನಾ ಸೋಂಕಿನ ಶಂಕೆ ಇದ್ದುದರಿಂದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ದುಬೈನಿಂದ ಬಂದ ಸ್ಪೈಸ್ಜೆಟ್ ವಿಮಾನದಲ್ಲಿ ಈ ವ್ಯಕ್ತಿ ಪ್ರಯಾಣಿಸಿದ್ದು, ಅದರಲ್ಲಿ 165 ಜನ ಪ್ರಯಾಣಿಕರಿದ್ದರು. ಅವರೆಲ್ಲರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು.