ನವದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್ಯುನಲ್ಲಿ ಭಾನುವಾರನಡೆದ ದಾಂದಲೆಗೆ ವಿವಿಧ ಕ್ಷೇತ್ರದ ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.
ನೀವು ಯಾವ ರಾಜಕೀಯ ಪಕ್ಷದವರು, ಯಾವ ಸಿದ್ಧಾಂತದವರು ಎಂಬುದು ಮುಖ್ಯವಲ್ಲ. ನಿಮ್ಮ ಧರ್ಮ ಯಾವುದು ಎಂಬುದೂ ಮುಖ್ಯವಲ್ಲ. ನೀವು ಭಾರತೀಯರಾಗಿದ್ದರೆ ಶಸ್ತ್ರಸಜ್ಜಿತ ಗೂಂಡಾ ವರ್ತನೆ ಸಹಿಸಲು ಸಾಧ್ಯವಿಲ್ಲ
–ಆನಂದ್ ಮಹೀಂದ್ರಾ, ಉದ್ಯಮಿ
ನಾನೇನು ಕಂಡೆನೋ ಅದು ಆಘಾತಕರ. ನನ್ನ ಮನ ಕಲಕಿದೆ. ರಾತ್ರಿ ನಿದ್ದೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ಇದನ್ನು ಯಾರು ಮಾಡಿದ್ದಾರೆಯೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು
–ಅನಿಲ್ ಕಪೂರ್, ಬಾಲಿವುಡ್ ನಟ
ಸತ್ಯಕ್ಕೆ ಕಣ್ಣು ಕೊಟ್ಟು ನೋಡಬೇಕು. ನಮ್ಮೊಂದಿಗೇ ನಾವು ಸಂಘರ್ಷಕ್ಕೆ ಇಳಿದಿದ್ದೇವೆ. ಸಿದ್ಧಾಂತಗಳಲ್ಲಿ ಎಷ್ಟೇ ವ್ಯತ್ಯಾಸ ಇದ್ದರೂ ನಾವು ಒಂದು ದೇಶದ ಪ್ರಜೆಗಳು. ನಮ್ಮ ಸಮಸ್ಯೆಗಳಿಗೆ ಮಾನವೀಯವಾದ ಪರಿಹಾರ ಕಂಡುಕೊಳ್ಳಬೇಕು. ಈ ದೇಶ ನಿರ್ಮಾಣವಾದ ಶಾಂತಿ ಮತ್ತು ಎಲ್ಲರ ಒಳಗೊಳ್ಳುವಿಕೆಯ ಸಿದ್ಧಾಂತಗಳನ್ನು ಮರುಸ್ಥಾಪಿಸಬೇಕು
–ಆಲಿಯಾ ಭಟ್, ಬಾಲಿವುಡ್ ನಟಿ
ಭಾರತದ ಯುವಜನ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರತಿದಿನವೂ ದಮನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನೊಂದಿಗೆ, ಗೂಂಡಾಗಳನ್ನು ಬಳಸಿ ಯುವಜನರ ಮೇಲೆ ನಡೆಯುತ್ತಿರುವ ಹಿಂದೆಂದೂ ಕಂಡರಿಯದ ಹಿಂಸೆಯು ಖಂಡನೀಯ
–ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಜೆಎನ್ಯು ವಿದ್ಯಾರ್ಥಿಗಳ ಮೇಲಿನ ದಾಳಿಯು ಮುಂಬೈ ಮೇಲಿನ 26/11ರ ದಾಳಿಯನ್ನು ನೆನಪಿಸುತ್ತಿದೆ. ಜೆಎನ್ಯುನಲ್ಲಿ ನಡೆದಂತಹುದು ಮಹಾರಾಷ್ಟ್ರ
ದಲ್ಲಿ ನಡೆಯಲು ಅವಕಾಶ ಕೊಡುವುದಿಲ್ಲ. ದೇಶವು ಸುರಕ್ಷಿತವಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದೆ
–ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಇಂತಹ ಘಟನೆಗಳ ವರದಿಗಾರಿಕೆ ಮತ್ತು ಅವುಗಳನ್ನು ಭಾವುಕಗೊಳಿಸುವಲ್ಲಿ ಮಾಧ್ಯಮವೂ ಸೇರಿ ಎಲ್ಲರೂ ಸಂಯಮ ತೋರಬೇಕಾದ ಸಮಯ ಇದು ಎಂದು ನನ್ನ ಅಭಿಪ್ರಾಯ. ಜೆಎನ್ಯು ಘಟನೆ ದುರದೃಷ್ಟಕರ
–ಪೀಯೂಷ್ ಗೋಯಲ್, ಕೇಂದ್ರ ಸಚಿವ
ಶಿಕ್ಷಣ ಸಂಸ್ಥೆಗಳು ರಾಜಕಾರಣದ ಯುದ್ಧಭೂಮಿಯಾಗಲು ಅವಕಾಶ ಕೊಡಬಾರದು ಎಂದು ಹಿಂದೆಯೂ ಹೇಳಿದ್ದೆ. ಈಗ ಅದನ್ನೇ ಪುನರುಚ್ಚರಿಸುತ್ತೇನೆ. ಹಾಗಾದರೆ, ಅದು ವಿದ್ಯಾರ್ಥಿಗಳ ಜೀವನ ಮತ್ತು ಪ್ರಗತಿಗೆ ಮಾರಕ. ರಾಜಕೀಯ ದಾಳವಾಗಿ ವಿದ್ಯಾರ್ಥಿಗಳ ಬಳಕೆ ಆಗದಿರಲಿ ಎಂದು ಹಾರೈಸುತ್ತೇನೆ
–ಸ್ಮೃತಿ ಇರಾನಿ, ಸಚಿವೆ
ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ರಾಜಕೀಯ ಅಡ್ಡೆಯಾಗಲು ಅವಕಾಶ ಕೊಡಬಾರದು ಎಂದು ಹಿಂದೆಯೂ ಹೇಳಿದ್ದೆ. ವಿ.ವಿ.ಗಳು ದೇಶದ ಭವಿಷ್ಯವನ್ನು ರೂಪಿಸುವ ಕಲಿಕಾ ಕೇಂದ್ರಗಳು. ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
–ರಮೇಶ್ ಪೋಖ್ರಿಯಾಲ್ ನಿಶಾಂಕ್, ಮಾನವ ಸಂಪನ್ಮೂಲ ಸಚಿವ
ಒಂದೆಡೆ ಅವರು (ಬಿಜೆಪಿ) ಗೂಂಡಾಗಳನ್ನು ಕಳುಹಿಸಿದ್ದಾರೆ. ಮತ್ತೊಂದೆಡೆ, ಸುಮ್ಮನಿರುವಂತೆ ಪೊಲೀಸರಿಗೆ ಹೇಳಿದ್ದಾರೆ. ತಮ್ಮ ಮೇಲಿನವರು ಸುಮ್ಮನಿರಿ ಎಂದ ಮೇಲೆ ಪೊಲೀಸರು ಏನು ಮಾಡಲು ಸಾಧ್ಯ
–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.