ತಾವರಗೇರಾ (ಕೊಪ್ಪಳ ಜಿಲ್ಲೆ): ಕುಷ್ಟಗಿ ತಾಲ್ಲೂಕಿನ ನವಲಹಳ್ಳಿ ಗ್ರಾಮದ ಮಂಜುನಾಥ ಹವಳಪ್ಪ ದೊಡ್ಡಮನಿ ಅವರು ರಾಷ್ಟ್ರೀಯ ವೈದ್ಯಕೀಯ ಅರ್ಹತಾ (ನೀಟ್– ಸೂಪರ್ ಸ್ಪೆಷಾಲಿಟಿ) ಪರೀಕ್ಷೆಯಎಂಡೊಕ್ರೈನೊಲಾಜಿ (ಅಂತಃಸ್ರಾವಶಾಸ್ತ್ರ) ವಿಷಯದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ನವಲಹಳ್ಳಿಯಲ್ಲಿ ಶಿಕ್ಷಣ ಪೂರೈಸಿದ ಮಂಜುನಾಥ ಅವರು ಹೊಸಪೇಟೆಯ ‘ಸ್ಮಯೋರ್’ಕಾಲೇಜಿನಲ್ಲಿ ಪಿಯು ವಿಜ್ಞಾನ ಶಿಕ್ಷಣ ಪಡೆದರು.ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿ, ವೈದ್ಯಕೀಯ ಎಂ.ಡಿ ಕೋರ್ಸ್ ಅನ್ನು ಚಂಡೀಗಡದಲ್ಲಿ ಪೂರೈಸಿದರು.
‘ಚಂಡೀಗಡದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದ ಜೊತೆಗೆ ಗ್ರಂಥಾಲಯದಲ್ಲಿ ಉಪಯುಕ್ತ ಪುಸ್ತಕಗಳು ಸಿಕ್ಕಿದವು. ದಿನಕ್ಕೆ 16 ಗಂಟೆ ಅಭ್ಯಾಸ ಮಾಡುವುದಲ್ಲದೆ ಸ್ನೇಹಿತರ ಜೊತೆ ಚರ್ಚಿಸುತ್ತಿದ್ದೆ. ಎಂಡೊಕ್ರೈನೊಲಾಜಿ ಪರೀಕ್ಷೆಗೆ 1,600 ಅಭ್ಯರ್ಥಿಗಳು ಹಾಜರಾಗಿದ್ದರು’ ಎಂದು ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.
ಮಂಜುನಾಥ ಅವರ ತಂದೆ ಹವಳಪ್ಪ ಬಾಗಲಕೋಟೆಯ ಬದಾಮಿ ತಾಲ್ಲೂಕಿನ ಹವಳಕೋಡದವರು. 1998ರಿಂದ ನವಲಹಳ್ಳಿಯಲ್ಲಿ ನೆಲೆಸಿರುವ ಅವರು ಕುಷ್ಟಗಿಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿದ್ದಾರೆ.