ಗೋಣಿಕೊಪ್ಪಲು: ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲದಿನಗಳ ಹಿಂದೆ ರಾಷ್ಟ್ರೀಯ ರೈಫಲ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊನ್ನಂಪೇಟೆಯ ಯೋಧ ಎಚ್.ಎನ್.ಮಹೇಶ್ ಅವರ ಮೂಗಿಗೆ ಗುಂಡು ತಗುಲಿದೆ. ಪಂಜಾಬ್ನ ಚಂಡೀಗಡ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರಪತಿಯವರಿಂದ ಶೌರ್ಯಪ್ರಶಸ್ತಿಗೆ ಭಾಜನರಾದ ಮಹೇಶ್ ಮೇ 29ರಂದು ಜಮ್ಮು-ಕಾಶ್ಮೀರದ ಶೋಪಿಯಾನ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಹಾರಿಸಿದ ಗುಂಡಿನಿಂದ ಈ ಅಪಾಯ ಸಂಭವಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಧನ ತಂದೆ ನಾಗರಾಜು, ದೂರವಾಣಿ ಮುಖಾಂತರ ಮಾತನಾಡಿರುವ ಮಗ, ‘ಗುಣಮುಖವಾಗುತ್ತಿದ್ದೇನೆ, ಹೆಚ್ಚಿನ ಅಪಾಯವಿಲ್ಲ ಎಂದು ತಿಳಿಸಿದ್ದಾನೆ. ಆದರೆ ಹೆಚ್ಚು ಮಾತನಾಡಿಲು ಆಗುತ್ತಿರಲಿಲ್ಲ’ ಎಂದು ಹೇಳಿದರು.