ಬೆಂಗಳೂರು:‘ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರುತ್ತಾನೆ ಎಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ’ ಎಂದು ದೇವೇಗೌಡ ಹೇಳಿದರು.
‘ಅನಿವಾರ್ಯ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಆತ ಸ್ಪರ್ಧಿಸಬೇಕಾಯಿತು. ಈಗ ಆತ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಹೆಸರು ಗಳಿಸುತ್ತಿದ್ದಾನೆ’ ಎಂದರು.
‘ನಾನು ಯಾವತ್ತೂ ಕುಟುಂಬ ರಾಜಕಾರಣ ಮಾಡಿಲ್ಲ’ ಎಂದು ಪುನರುಚ್ಚರಿಸಿದ ಅವರು, ‘ನಮ್ಮ ಕುಟುಂಬದಿಂದ ಮೂವರು ಸ್ಪರ್ಧೆ ಮಾಡಬೇಕಾದ ಸಂದರ್ಭ ಎದುರಾಯಿತು. ಹೀಗೆ ಸ್ಪರ್ಧಿಸಿದ್ದಕ್ಕಾಗಿ ಎರಡು ಕಡೆ ಸೋಲಿಸುವ ಮೂಲಕ ಜನ ಶಿಕ್ಷೆ ನೀಡಿದರು ಎಂದು ಭಾವಿಸುತ್ತೇನೆ’ ಎಂದು ಅವರು ಹೇಳಿದರು.
‘ಈ ಬಾರಿ ಚುನಾವಣೆಗೆ ಆಕಸ್ಮಿಕವಾಗಿ ಸ್ಪರ್ಧಿಸಿದೆ. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೇನಿದ್ದರೂ ಪಕ್ಷ ಕಟ್ಟುವುದಕ್ಕಾಗಿ ದುಡಿಯುವೆ’ ಎಂದು ಅವರು ಹೇಳಿದರು.