ಕಾಯ್ದೆ ತಿದ್ದುಪಡಿ ಮಾಡಿ
ಆರ್ಟಿಇ ಅಡಿ ದಾಖಲಾದ ವಿದ್ಯಾರ್ಥಿಗಳ ಭವಿಷ್ಯ ಸರ್ಕಾರದ ಕೈಯಲ್ಲಿದೆ. ಬಡ ವಿದ್ಯಾರ್ಥಿಗಳಿಗೆ ಆರ್ಟಿಇ ಅನ್ವಯ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ. ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಾದಿ ಸುಗಮಗೊಳಿಸಬೇಕು.
ಜಗದೀಶ್,ಚಿತ್ರದುರ್ಗ
ಕಾಯ್ದೆ ವಿಸ್ತರಿಸಿ
ಆರ್ಟಿಇ ಮೂಲಕ 8ನೇ ತರಗತಿವರೆಗೆ ಶಿಕ್ಷಣ ಪೂರೈಸಿ ರುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಆರ್ಟಿಇ ರಹಿತ ಶಿಕ್ಷಣ ಹೊರೆಯಾಗಲಿದೆ. ಈಗಿನ ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ನರಳುವುದು ನಿಶ್ಚಿತ. ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ಮುಗಿಲುಮುಟ್ಟುವ ಘೋಷಣೆ ಕೂಗುವ ನಾಯಕರಿಗೆ ಇದರ ಮನವರಿಕೆ ಆಗಬೇಕು. ಕೂಡಲೇ ಈ ಗೊಂದಲ ಪರಿಹರಿಸಿ, ಆರ್ಟಿಇ ಮುಂದುವರಿಸಿ.
ಚಂದ್ರಶೇಖರ್,ದಾವಣಗೆರೆ
ಕೈಬಿಡಬೇಡಿ
ಖಾಸಗಿ ಶಾಲೆಗಳಲ್ಲಿ ಓದಲು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆರ್ಟಿಇ ದಾರಿದೀಪವಾಗಿತ್ತು. ಇಲ್ಲಿವರೆಗೆ ಪಡೆದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು. ದುಬಾರಿ ಶುಲ್ಕಕ್ಕೆ ಹೆದರಿ ಬೇರೆ ಶಾಲೆಗಳಿಗೆ ವರ್ಗಾಯಿಸಿಕೊಂಡರೆ ಅವರ ಜ್ಞಾನಮಟ್ಟದಲ್ಲಿ ಏರುಪೇರಾ ಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಆರ್ಟಿಇ ನಡು ನೀರಲ್ಲಿ ತೇಲಿಬಿಡುವಂತಿದೆ.
ಮೇಘನಾ,ಮಂಡ್ಯ
ತಪ್ಪದ ಶುಲ್ಕದ ಹೊರೆ
ಆರ್ಟಿಇಯಿಂದ ಖಾಸಗಿ ಶಾ→ಲೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪಡೆಯಬಹುದು ಎಂದು ನಂಬಿದ್ದೆವು. ಆದರೆ, ಸ್ಮಾರ್ಟ್ಕ್ಲಾಸ್ ನೆಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಹಣವಸೂಲಿ ಮಾಡುತ್ತಿವೆ. ಅಲ್ಲಿನ ವ್ಯವಸ್ಥೆಗಳಿಗೆ ಹೆದರಿ ಪೋಷಕರು ಹಣ ಪಾವತಿಸುತ್ತಾರೆ. ಆರ್ಟಿಇ ಪೋಷಕರ ಮೂಗಿಗೆ ತುಪ್ಪ ಸವರಿದೆ.
ಕೋಮಲ,ತುಮಕೂರು
‘ಖಾಸಗಿ’ ಶಾಲೆಗಳ ಭ್ರಮೆ ಬಿಡಿ
ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಖಾಸಗಿ ಶಾಲೆಗಳಿಗಿಂತ ಕಡಿಮೆ ಎಂಬ ಭಾವನೆ ಪೋಷಕರಲ್ಲಿ ಬೇರೂರಿದೆ. ಖಾಸಗಿ ಶಾಲೆಗಳ ಶಿಕ್ಷಣ ಗುಣಮಟ್ಟ ಉತ್ತಮವಾದದ್ದು ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು. ಸರ್ಕಾರ ತನ್ನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಇಂದಿನ ಆಧುನಿಕ ಶೈಕ್ಷಣಿಕ ವ್ಯವಸ್ಥೆಗಳಿಗೆ ಉನ್ನತೀಕರಿಸಬೇಕು.
ಸಿ.ಪಿ.ಸಿದ್ಧಾಶ್ರಮ,ಮೈಸೂರು
ಸರ್ಕಾರಿ ಶಾಲೆ ಅಭಿವೃದ್ಧಿ
ಆರ್ಟಿಇ ಮೂಲಕ ಖಾಸಗಿ ಶಾಲೆ ಗಳಿಗೆ ಉತ್ತೇಜನ ನೀಡುವ ಬದಲಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿತ್ತು. ಈ ಶಾಲೆಗಳಲ್ಲೂಆಧುನಿಕ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ. ಆರ್ಟಿಇ ಯಂತಹ ಅವೈಜ್ಞಾನಿಕ ಕಾಯ್ದೆ ಜಾರಿಗೊಳಿಸುವ ಬದಲು ಅದಕ್ಕೆ ಬಳಕೆ ಯಾದ ಹಣದಿಂದ ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಬಹುದಿತ್ತು.
ಬಾಗವಾನ,ಗದಗ
ಎಸ್ಸೆಸ್ಸೆಲ್ಸಿವರೆಗೆ ಬೇಕು
10ನೇ ತರಗತಿವರೆಗೆ ಆರ್ಟಿಇ ವಿಸ್ತರಣೆಯಾದರೆ ವಿದ್ಯಾರ್ಥಿಗಳು ಒಂದೇ ಶಾಲೆಯಲ್ಲಿ ಒಂದು ಹಂತದ ಶಿಕ್ಷಣ ಪೂರೈಸಲು ಸಹಕಾರಿಯಾಗಲಿದೆ. ಕಾಯ್ದೆಗೆ ಅಡಕತ್ತರಿ ಹಾಕುವುದರಿಂದ 85 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ನೀಡಿದಂತಾಗುತ್ತದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಎಸ್ಸೆಸ್ಸೆಲ್ಸಿವರೆಗೆ ಆರ್ಟಿಇ ವಿಸ್ತರಣೆ ಮಾಡಬೇಕು.
ಮುತ್ತುರಾಜ್,ಎಚ್.ಡಿ.ಕೋಟೆ
ಕೈಕೊಡದಿರಲಿ ಕಾಯ್ದೆ
ಕಾಯ್ದೆಯಡಿ 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಆರ್ಟಿಇ ಸ್ಥಗಿತದಿಂದ ವಿದ್ಯಾರ್ಥಿಗಳ ಚಿಗುರುವ ಕನಸನ್ನು ಚಿವುಟಿದಂತಾಗಿದೆ. ವಿದ್ಯಾರ್ಥಿಗಳ ಕೈಬಿಡಬಾರದು.
ಮಂಜುಳಾ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.