ಪೀಣ್ಯ ದಾಸರಹಳ್ಳಿ: 'ಮತಗಟ್ಟೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತನಿಗೆ ಉನ್ನತ ಸ್ಥಾನಮಾನಗಳನ್ನು ನೀಡುವ ಪಕ್ಷವೆಂದರೆ ಅದು ಬಿಜೆಪಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಶೆಟ್ಟಿಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಕುಂದುಕೊರತೆಗಳ ಚರ್ಚೆ ಸಭೆಯಲ್ಲಿ ಮಾತನಾಡಿದರು.
'ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುತ್ತದೆ. ನಾನು ಕೂಡಾ ಕುಗ್ರಾಮದಿಂದ ಬಂದವನು. ನನ್ನ ಸಂಘಟನೆ, ಪಕ್ಷ ನಿಷ್ಠೆ ನೋಡಿ ನನಗೆ ಇಂದು ಪಕ್ಷ ಉನ್ನತ ಸ್ಥಾನ ನೀಡಿದೆ. ಪಕ್ಷಕ್ಕೆ ಯಾವಾಗಲೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು' ಎಂದರು.
ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮುನಿರಾಜು, ‘ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು' ಎಂದರು. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್.ಲೋಕೇಶ್ ಇದ್ದರು.