ಹುಬ್ಬಳ್ಳಿ: ನಗರದ ವಿನಾಯಕ ಕಾಲೊನಿಯ ಕೋವಿಡ್-19 ಸೋಂಕಿತ ವ್ಯಕ್ತಿಗೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ವೈದ್ಯರು ಪ್ಲಾಸ್ಮಾ ಚಿಕಿತ್ಸೆ ನೀಡಿದ್ದು, ಆ ವ್ಯಕ್ತಿ ಗುಣಮುಖನಾಗುತ್ತಿದ್ದಾನೆ. ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಮೊದಲ ಪ್ರಕರಣವಿದು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು ಸೋಂಕಿನಿಂದ ಮೇ ಮೊದಲ ವಾರದಲ್ಲಿ ಚೇತರಿಸಿಕೊಂಡಿದ್ದ ಹುಬ್ಬಳ್ಳಿಯ 64 ವರ್ಷದ ಖಬರಸ್ತಾನದ ಕಾವಲುಗಾರನ (ಪಿ–363) ದೇಹದಿಂದ ಪ್ಲಾಸ್ಮಾ ತೆಗೆದು ಮಹಾರಾಷ್ಟ್ರದಿಂದ ಮರಳಿದ್ದ (ಪಿ–2710) ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. ಈ ವ್ಯಕ್ತಿಗೆ ಆರಂಭದಲ್ಲಿ ಬಹಳಷ್ಟು ಉಸಿರಾಟದ ತೊಂದರೆಯಿತ್ತು. ಮೇ 29 ಹಾಗೂ 30ರಂದು ಪ್ಲಾಸ್ಮಾ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಸಿರಾಟದ ಸಮಸ್ಯೆ ಕಡಿಮೆಯಾಗಿದೆ. ಆ ವ್ಯಕ್ತಿಗೆ 64 ವರ್ಷವಾದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಶೇ 40ರಷ್ಟು ಗುಣಮುಖರಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ’ ಎಂದು ಹೇಳಿದರು.
11 ಜನ ಚೇತರಿಕೆ: ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 11 ಜನ ಗುಣಮುಖರಾಗಿದ್ದು ಅವರನ್ನು ಸೋಮವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.