ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದಾರೆ.
ಶನಿವಾರ ಮುಂಜಾನೆ 6.30ಕ್ಕೆ ಕರೆ ಮಾಡಿದ್ದ ಮೋದಿ ಅವರು, ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದಿರುವುದಕ್ಕೆ ಮೊದಲಿಗೆ ಅಭಿನಂದನೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಡಳಿತ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದ ಪ್ರಧಾನಿ, ಆರ್ಥಿಕ
ಪರಿಸ್ಥಿತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವಿವರವನ್ನು ಪಡೆದರು.
ಬಿಜೆಪಿ ಸರ್ಕಾರವನ್ನು ಸದೃಢ ಪಡಿಸಿದ್ದನ್ನು ಶ್ಲಾಘಿಸಿದ ಅವರು, ಕರ್ನಾಟಕದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬೇಕಾದ ಕ್ರಮವನ್ನೂ ಕೈಗೊಳ್ಳಿ. ಕೇಂದ್ರದ ಪಾಲನ್ನು ಸಕಾಲದಲ್ಲಿ ತಲುಪಿಸಲು ಬದ್ಧವಿದ್ದೇವೆ. ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಿ’ ಎಂದು ಕಿವಿಮಾತು ಹೇಳಿದರು.
‘ಪೌರತ್ವ ಕಾಯ್ದೆ ಅನುಷ್ಠಾನದತ್ತ ಆದ್ಯ ಗಮನ ಹರಿಸಿ. ನಮ್ಮ ಪಕ್ಷದ ಮಹತ್ವದ ಕಾಯ್ದೆ ಹಾಗೂ ಯೋಜನೆ ಇದಾಗಿದ್ದು, ಸಚಿವರು ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಎಂದು ನಿರ್ದೇಶನ ನೀಡಿದರು’ ಎಂದು ಮೂಲಗಳು ವಿವರಿಸಿವೆ.
‘ಇದು ಮೊದಲ ಕರೆಯೇನಲ್ಲ. ಮುಖ್ಯಮಂತ್ರಿಗಳ ಜತೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡುತ್ತಿರುತ್ತಾರೆ. ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡ ಬಳಿಕ ಇದು ಆರನೇ ಕರೆ’ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.