ಬಳ್ಳಾರಿ: ರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಣದಿಂದ ನನ್ನಮಗ, ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದಿರುವುದು ಏಕೆ ಎಂದು ಗೊತ್ತಿಲ್ಲ. ಆದರೆ ಅದೊಂದು ರಾಜಕೀಯ ಆತ್ಮಹತ್ಯೆ ಯತ್ನ, ಆತ್ಮದ್ರೋಹದ ಕೆಲಸ ಅಷ್ಟೇ' ಎಂದು ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನ್ನ ಮಗ ಹೇಡಿಯಂತೆ ವರ್ತಿಸಿದ್ದಾನೆ. ಒಂದೇ ಮನೆಯಲ್ಲಿ ವಾಸವಿದ್ದರೂ ಆತನನ್ನು ನಾನು ಭೇಟಿಯಾಗಲಾರೆ' ಎಂದರು.
'ಮತದಾನ ಎರಡು ದಿನವಿರುವಾಗ ನಡೆದಿರುವ ಈ ಘಟನೆ ಅನೈತಿಕವಾದದ್ದು. ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ನನ್ನ ಮಗ ಹೀಗೆ ಮಾಡಬಾರದಾಗಿತ್ತು. ಕಣದಲ್ಲಿ ಉಳಿದು ಸ್ಪರ್ಧೆಯನ್ನು ಎದುರಿಸಬೇಕಾಗಿತ್ತು'ಎಂದು ಪ್ರತಿಪಾದಿಸಿದರು.