ನವದೆಹಲಿ: ಬಡ್ತಿ ಮೀಸಲಾತಿ ಕಾಯ್ದೆ ವಿರೋಧಿಸಿದ್ದ ಪ್ರಕರಣದ ತೀರ್ಪಿನ ಅನ್ವಯ ಹುದ್ದೆ ಆಧಾರಿತ ಮೀಸಲಾತಿ ನೀಡಬೇಕು ಹಾಗೂ ನೇಮಕಾತಿಯ ಆರಂಭಿಕ ಹಂತದಲ್ಲೇ ಕೆನೆಪದರದ ತತ್ವ ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾಮಾನ್ಯ ವರ್ಗದ ನೌಕರರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ರಾಜ್ಯ ಸರ್ಕಾರದ ನೂತನ ಕಾಯ್ದೆಗೆ ಸಮ್ಮತಿ ಸೂಚಿಸಿ ಕಳೆದ ಮೇ 10ರಂದು ನೀಡಿರುವ ತೀರ್ಪಿನ ಮರು ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿರುವ ಬಿ.ಕೆ. ಪವಿತ್ರ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆಯನ್ನು ಮೊದಲು ತೀರ್ಪು ನೀಡಿರುವ ಪೀಠವೇ ಕೈಗೆತ್ತಿಕೊಳ್ಳಬೇಕು. ಆದರೂ ಯಾವಾಗ ವಿಚಾರಣೆ ಆರಂಭವಾಗಲಿದೆ ಎಂಬುದನ್ನು ತಿಳಿಸಲಾಗುವುದು. ಜುಲೈ 29ರಂದು ಈ ಕುರಿತು ನಿರ್ಧರಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ವಿನೀತ್ ಶರಣ್ ಅವರಿದ್ದ ಪೀಠ ಶುಕ್ರವಾರ ಅಭಿಪ್ರಾಯಪಟ್ಟಿತು.
ಬಿ.ಕೆ. ಪವಿತ್ರ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ತೀರ್ಪು ನೀಡಿತ್ತು.
ಮೇ 10ರ ತೀರ್ಪಿನ ಮರು ಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೆಲವು ದಿನಗಳ ಕಾಲ ಮುಂದೂಡಬೇಕು ಹಿರಿಯ ವಕೀಲರಾದ ರಾಜೀವ್ ಧವನ್ ಹಾಗೂ ಕುಮಾರ್ ಪರಿಮಳ್ ನ್ಯಾಯಪೀಠಕ್ಕೆ ಇದೇ ವೇಳೆ ಮನವಿ ಮಾಡಿದರು.
ಆದರೆ, ಈಗಾಗಲೇ ಇತ್ಯರ್ಥವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಸಲ್ಲಿಸಲಾದ ಈ ಅರ್ಜಿಯು ಸಮರ್ಥನೀಯವೇ ಎಂಬುದನ್ನು ಪ್ರಶ್ನಿಸಲಾಗುವುದು ಎಂದು ಎಸ್.ಸಿ, ಎಸ್.ಟಿ. ನೌಕರರ ಪರ ವಕೀಲರಾದ ಇಂದಿರಾ ಜೈಸಿಂಗ್ ಹೇಳಿದರು.